Blog

  • ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 81 ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳಿಗೆ (MHUs) ಚಾಲನೆ ನೀಡಿದ್ದಾರೆ.

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ:

    • ಗುರಿ:- ಕರ್ನಾಟಕದ ದೂರದ, ತಲುಪಲು ಅಸಾಧ್ಯವಾದ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
    • ಇಲ್ಲಿಯವರೆಗೆ ಔಪಚಾರಿಕ ಆರೋಗ್ಯ ವ್ಯವಸ್ಥೆಯ ಹೊರಗೆ ಉಳಿದಿದ್ದ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳು ತಲುಪುವಂತೆ ಮಾಡಲು ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು.
    • ವ್ಯಾಪ್ತಿ:- “ಅತಿದೂರದ ಗ್ರಾಮಗಳಿಗೂ ಆರೋಗ್ಯ ಸೇವೆ” ಎಂಬ ಧ್ಯೇಯವಾಕ್ಯದಡಿ ಪ್ರಾರಂಭಿಸಲಾದ ಈ ಸಂಚಾರಿ ಘಟಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 32 ಮೀಸಲು ಕ್ಷೇತ್ರಗಳು ಸೇರಿದಂತೆ, ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲಿವೆ.
    • ಅನುಷ್ಠಾನ ಮತ್ತು ನಿಧಿ: ಒಟ್ಟು 81 ಘಟಕಗಳ ಪೈಕಿ 49 ಘಟಕಗಳನ್ನು “ರಾಷ್ಟ್ರೀಯ ಆರೋಗ್ಯ ಅಭಿಯಾನ” (NHM)ದ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಇನ್ನುಳಿದ 32 ಘಟಕಗಳಿಗೆ ರಾಜ್ಯ ಸರ್ಕಾರದ “ಪರಿಶಿಷ್ಟ ಜಾತಿಗಳ ಉಪ-ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ- ಯೋಜನೆ” (SCSP/TSP) ಹಂಚಿಕೆಯಡಿ ಹಣಕಾಸು ಒದಗಿಸಲಾಗುತ್ತಿದೆ.
    • ಸಿಬ್ಬಂದಿ:- ಪ್ರತಿಯೊಂದು ಸಂಚಾರಿ ಆರೋಗ್ಯ ಘಟಕವು ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ದಾದಿ (ನರ್ಸ್) ಮತ್ತು ಒಬ್ಬರು ಪ್ರಯೋಗಾಲಯ ತಂತ್ರಜ್ಞರನ್ನು ಒಳಗೊಂಡಿರುತ್ತದೆ.
    • ಒದಗಿಸಲಾಗುವ ಸೇವೆಗಳು: ಹೊರರೋಗಿ ಸಮಾಲೋಚನೆ (OPD), ತ್ವರಿತ ರೋಗನಿರ್ಣಯ ಕಿಟ್‌ಗಳ ಮೂಲಕ ಮೂಲಭೂತ ಪರೀಕ್ಷೆಗಳು, ಉಚಿತ ಔಷಧಿಗಳು, ಉಲ್ಲೇಖಿತ ಸೇವೆಗಳು ಮತ್ತು ಸಮುದಾಯ ಆರೋಗ್ಯ ಮೇಲ್ವಿಚಾರಣೆ ಈ ಸೇವೆಯಲ್ಲಿ ಒಳಗೊಂಡಿವೆ.
    • ವಿಕೇಂದ್ರೀಕೃತ ಮೇಲ್ವಿಚಾರಣೆ: ಈ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಮೇಲ್ವಿಚಾರಣೆಯೊಂದಿಗೆ ಜಾರಿಗೆ ತರಲಾಗುತ್ತಿದ್ದು, ಇದು ಸ್ಥಳೀಯ ಅಗತ್ಯ ಮತ್ತು ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡುತ್ತದೆ.
    • ತುರ್ತು ಬಳಕೆ: ಈ ಘಟಕಗಳನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮತ್ತು ವಿಪತ್ತು ನಿರ್ವಹಣೆ ವೇಳೆಯೂ ನಿಯೋಜಿಸಲಾಗುವುದು.
    • ಹಂಚಿಕೆ: ಒಟ್ಟು ಘಟಕಗಳ ಪೈಕಿ 41 ವಾಹನಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ.
  • ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್ (DHRUVA) | ಟರ್ಕಿಯ “ಸ್ಟೋನ್ ಹಿಲ್ಸ್” ಯೋಜನೆ

    ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್ (DHRUVA)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಸಂವಹನ ಸಚಿವಾಲಯದ ಅಧೀನದಲ್ಲಿರುವ ಅಂಚೆ ಇಲಾಖೆಯು, ‘ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್’ (DHRUVA) ಎಂಬ ನೂತನ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.

    ಧ್ರುವ (DHRUVA) ವ್ಯವಸ್ಥೆಯ ಬಗ್ಗೆ:

    • ಇದು ಭೌತಿಕ ಸ್ಥಳಗಳ ಪರ್ಯಾಯ ವಿಳಾಸವಾಗಿ ಕಾರ್ಯನಿರ್ವಹಿಸುವ, ‘name@entity’ ಮಾದರಿಯ ಯುಪಿಐ ವಿಳಾಸಗಳನ್ನೇ ಹೋಲುವ ವರ್ಚುವಲ್ ವಿಳಾಸ ಲೇಬಲ್‌ಗಳನ್ನು ಸೃಷ್ಟಿಸುವ ಒಂದು ರಾಷ್ಟ್ರೀಯ ಚೌಕಟ್ಟಾಗಿದೆ.
    • ಈ ವ್ಯವಸ್ಥೆಯನ್ನು ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ (DPI) ಉಪಕ್ರಮಗಳ ಒಂದು ಭಾಗವಾಗಿ ರೂಪಿಸಲಾಗಿದ್ದು, ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೂ ಇದು ಅವಕಾಶ ಕಲ್ಪಿಸುತ್ತದೆ.

    ಟರ್ಕಿಯ “ಸ್ಟೋನ್ ಹಿಲ್ಸ್” ಯೋಜನೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಟರ್ಕಿಯ ಆಗ್ನೇಯ ಬೆಟ್ಟಗಳ ಪ್ರದೇಶಗಳಲ್ಲಿ ಕೈಗೊಳ್ಳಲಾದ ಪುರಾತತ್ವ ಸಂಶೋಧನೆಗಳು ಸುಮಾರು 11,000 ವರ್ಷಗಳ ಹಿಂದಿನ ಜೀವನಕ್ರಮವನ್ನು ಅನಾವರಣಗೊಳಿಸಿವೆ. ಇದು ಮಾನವ ಇತಿಹಾಸದಲ್ಲಿ ಆರಂಭಿಕ ವಸಾಹತು ಸಮುದಾಯಗಳು ಉದಯಿಸಿದ ಕಾಲಘಟ್ಟವನ್ನು ಪ್ರತಿಬಿಂಬಿಸುತ್ತದೆ.

    “ಸ್ಟೋನ್ ಹಿಲ್ಸ್” (ಶಿಲಾ ಬೆಟ್ಟಗಳ) ಯೋಜನೆಯ ಬಗ್ಗೆ:

    • ಪ್ರಾರಂಭ:- ಈ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು. 
    • ಒಳಗೊಳ್ಳುವಿಕೆ:- ಇದು ವಿಶ್ವದ ‘ನವಶಿಲಾಯುಗದ ರಾಜಧಾನಿ’ ಎಂದು ಕರೆಯಲ್ಪಟ್ಟ “ಸಾನ್ಲಿಯುರ್ಫಾ ಪ್ರಾಂತ್ಯ”ದ 12 ತಾಣಗಳನ್ನು ಒಳಗೊಂಡಿದೆ.
    • ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ “ಗೋಬೆಕ್ಲಿ ಟೆಪೆ”ಯನ್ನು ಒಳಗೊಂಡಿದೆ. ಇದು ಉತ್ತರ ಮೆಸೊಪಟೇಮಯಾದಲ್ಲಿ ಪತ್ತೆಯಾದ ಅತ್ಯಂತ ಹಳೆಯ ಬೃಹತ್ ಶಿಲಾಯುಗದ ರಚನೆಯಾಗಿದೆ.
    • ಭಾರತದಲ್ಲಿ ನವಶಿಲಾಯುಗದ ವಸಾಹತುಗಳು:- ವಾಯುವ್ಯ ಭಾಗ (ಕಾಶ್ಮೀರ), ದಕ್ಷಿಣ ಭಾಗ (ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ), ಈಶಾನ್ಯ ಭಾಗ (ಮೇಘಾಲಯ) ಮತ್ತು ಪೂರ್ವ ಭಾಗಗಳಲ್ಲಿ (ಬಿಹಾರ ಮತ್ತು ಒಡಿಶಾ) ಕಂಡುಬಂದಿವೆ.
    • ಭಾರತದ ಕೆಲವು ಪ್ರಮುಖ ನವಶಿಲಾಯುಗದ ನೆಲೆಗಳೆಂದರೆ:- ಬುರ್ಜಾಹೋಮ್ (ಕಾಶ್ಮೀರ), ಗುಫ್ಕ್ರಾಲ್ (ಕಾಶ್ಮೀರ), ಚಿರಾಂಡ್ (ಬಿಹಾರ) ಮತ್ತು ಉತನೂರು (ಆಂಧ್ರಪ್ರದೇಶ).

    ಶಿಲಾಯುಗದ ಬಗ್ಗೆ:

    • ಇದು ಶಿಲಾ ಉಪಕರಣಗಳ ಬಳಕೆಯಿಂದ ಗುರುತಿಸಲ್ಪಟ್ಟ ಇತಿಹಾಸಪೂರ್ವ ಕಾಲವಾಗಿದ್ದು, ಇದನ್ನು ಮೂರು ಪ್ರಮುಖ ಕಾಲಘಟ್ಟಗಳಾಗಿ ವಿಂಗಡಿಸಲಾಗಿದೆ: 
    • ಹಳೆಯ (ಪ್ರಾಚೀನ) ಶಿಲಾಯುಗ
    • ಮಧ್ಯ ಶಿಲಾಯುಗ 
    • ನವಶಿಲಾಯುಗ
    1. ಹಳೆಯ (ಪ್ರಾಚೀನ) ಶಿಲಾಯುಗ: ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರು
    • ಇದು ಸುಮಾರು 26 ಲಕ್ಷ ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 10,000 ರವರೆಗೆ ಮುಂದುವರಿಯಿತು.
    • ಈ ಕಾಲದ ಮಾನವರು ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರಾಗಿದ್ದರು. ಇವರು ಬೇಟೆ, ಮಾಂಸ ಕತ್ತರಿಸುವುದು ಮತ್ತು ಆಹಾರ ಸಂಸ್ಕರಣೆಗಾಗಿ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.
    1. ಮಧ್ಯ ಶಿಲಾಯುಗ: ಸಸ್ಯ ಹಾಗೂ ಪ್ರಾಣಿಗಳ ಸಾಕಾಣಿಕೆ
    • ಈ ಕಾಲಘಟ್ಟವು ಕ್ರಿ.ಪೂ. 10,000 ರಿಂದ ಕ್ರಿ.ಪೂ. 5,000 ರ ನಡುವೆ ಸಂಭವಿಸಿದೆ (ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ).
    • ಇದು ವಿಶಿಷ್ಟವಾದ ಸೂಕ್ಷ್ಮ ಶಿಲಾ ಉಪಕರಣಗಳ ಬಳಕೆ, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಮತ್ತು ಸಸ್ಯ ಹಾಗೂ ಪ್ರಾಣಿಗಳ ಆರಂಭಿಕ ಸಾಕಾಣಿಕೆ/ ಪಳಗಿಸುವಿಕೆಯಿಂದ ಗುರುತಿಸಲ್ಪಟ್ಟಿದೆ.
    1. ನವಶಿಲಾಯುಗ: ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆ
    • ಇದು ಸುಮಾರು ಕ್ರಿ.ಪೂ. 12,000 ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 4500 ರಿಂದ ಕ್ರಿ.ಪೂ. 2000 ರ ನಡುವಿನ ಅವಧಿಯಲ್ಲಿ ಕೊನೆಗೊಂಡಿತು.
    • ಕೃಷಿ ಪದ್ಧತಿಯ ಅಳವಡಿಕೆ, ಪ್ರಾಣಿಗಳ ಸಾಕಣೆ ಮತ್ತು ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆಯು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ.
    • ಇದು ಕುಂಬಾರಿಕೆ, ನೇಯ್ಗೆ ಮತ್ತು ಜಟಿಲ ಸಾಮಾಜಿಕ ರಚನೆಗಳ ಅಭಿವೃದ್ಧಿಗೆ ನಾಂದಿ ಹಾಡಿತು.
    • ಕೃಷಿಯು ಮಾನವ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು ಮತ್ತು ನಾಗರಿಕತೆಗಳ ಉದಯಕ್ಕೆ ದಾರಿ ಮಾಡಿಕೊಟ್ಟಿತು.
  • ತುಂಗಭದ್ರಾ ಅಣೆಕಟ್ಟು

    ತುಂಗಭದ್ರಾ ಅಣೆಕಟ್ಟು

    ಇದೀಗ ಸುದ್ದಿಯಲ್ಲಿದೆ:

    • ತುಂಗಭದ್ರ ಅಣೆಕಟ್ಟಿಗೆ ಹೊಸ ಕ್ರೆಸ್ಟ್ ಗೇಟ್‌ಗಳನ್ನು ಜೂನ್ ವೇಳೆಗೆ ಸ್ಥಾಪಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
    • ಡಿಸೆಂಬರ್ ಅಂತ್ಯದ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟವು 1,613 ಅಡಿಗಳಿಗೆ ಇಳಿಕೆಯಾದ ನಂತರ, ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಆರಂಭಿಸಲಾಗುವುದು ಮತ್ತು ಇದನ್ನು ಜೂನ್ 2026ರ ವೇಳೆಗೆ ಪೂರ್ಣಗೊಳಿಸಲಾಗುವುದು.

    ತುಂಗಭದ್ರಾ ಅಣೆಕಟ್ಟಿನ ಕುರಿತು:

    • ಸ್ಥಳ:- ಈ ಅಣೆಕಟ್ಟನ್ನು ಕರ್ನಾಟಕದ ಹೊಸಪೇಟೆ ಮತ್ತು ಕೊಪ್ಪಳದ ಸಂಗಮದಲ್ಲಿ ತುಂಗಭದ್ರಾ ನದಿಗೆ (ಕೃಷ್ಣಾ ನದಿಯ ಉಪನದಿ) ಅಡ್ಡಲಾಗಿ ನಿರ್ಮಿಸಲಾಗಿದೆ.
    • ಪರ್ಯಾಯ ಹೆಸರು:- ಇದನ್ನು ‘ಪಂಪ ಸಾಗರ’ ಎಂದೂ ಕರೆಯುತ್ತಾರೆ.
    • ಸಂಗ್ರಹಣಾ ಸಾಮರ್ಥ್ಯ:- ತುಂಗಭದ್ರಾ ಜಲಾಶಯವು 101 ಟಿಎಂಸಿ (TMC – ಸಾವಿರ ಮಿಲಿಯನ್ ಘನ ಅಡಿಗಳು) ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
    • ಜಲಾನಯನ ಪ್ರದೇಶ:- 28,000 ಚದರ ಕಿಲೋಮೀಟರ್‌ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದೆ.
    • ಉದ್ದೇಶ:- ಇದು ನೀರಾವರಿ, ಜಲವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣದ ಉದ್ದೇಶಗಳನ್ನು ಪೂರೈಸುವ ಬಹು ಉದ್ದೇಶಗಳ ಜಲಾಶಯವಾಗಿದೆ.
    • ರಚನಾತ್ಮಕ ಸಂಯೋಜನೆ:- ಇದು ಭಾರತದ ಅತಿದೊಡ್ಡ ಕಲ್ಲಿನ ಕಟ್ಟಡದ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
  • ಶ್ಯೋಕ್ ಸುರಂಗಮಾರ್ಗ (Shyok Tunnel) | ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO) | ರೆಲೋಸ್ (RELOS) ಒಪ್ಪಂದ

    ಶ್ಯೋಕ್ ಸುರಂಗಮಾರ್ಗ (Shyok Tunnel)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಚಿವರು ಪೂರ್ವ ಲಡಾಖ್‌ನಲ್ಲಿ “ಶ್ಯೋಕ್ ಸುರಂಗಮಾರ್ಗ” ಹಾಗೂ ಗಡಿ ಭಾಗದ ಇತರ 124 ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.

    ಶ್ಯೋಕ್ ಸುರಂಗಮಾರ್ಗದ ಬಗ್ಗೆ:

    • ಇದು 920 ಮೀಟರ್ ಉದ್ದದ ‘ಕಟ್-ಅಂಡ್-ಕವರ್’ (ಮುಚ್ಚಿದ) ಮಾದರಿಯ ಸುರಂಗಮಾರ್ಗವಾಗಿದೆ.
    • ಭಾರತ ಮತ್ತು ಚೀನಾ ನಡುವೆ ಸೇನಾ ಬಿಕ್ಕಟ್ಟು ಏರ್ಪಟ್ಟಿರುವ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (LAC) ಸಮೀಪದ ಪ್ರದೇಶಗಳಿಗೆ ಇದು ಸರ್ವಕಾಲಿಕ ಸಂಪರ್ಕವನ್ನು ಕಲ್ಪಿಸುತ್ತದೆ.
    • ಮಹತ್ವ:- ಈ ಸುರಂಗಮಾರ್ಗವು ವಾಯು ಮಾರ್ಗದ ನಿರ್ವಹಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಮತ್ತು ಕಠಿಣ ಭೂಪ್ರದೇಶಗಳಲ್ಲಿನ ಸಾರಿಗೆ ಹಾಗೂ ಸರಬರಾಜು ಸವಾಲುಗಳನ್ನು ಪರಿಹರಿಸುತ್ತದೆ.
    • ವಿಶೇಷತೆ:- ವಿಶ್ವದ ಅತ್ಯಂತ ಕಠಿಣ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಈ ಭಾಗದಲ್ಲಿ ಸುರಂಗಮಾರ್ಗವನ್ನು ನಿರ್ಮಿಸಿರುವುದು ಇದರ ವಿಶೇಷವಾಗಿದೆ.

    ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಗಡಿಗಳ ಮೂಲಸೌಕರ್ಯ ಬಲವರ್ಧನೆಯ ಪ್ರಮುಖ ಕ್ರಮವಾಗಿ, ರಕ್ಷಣಾ ಸಚಿವರು ಲಡಾಖ್, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಏಳು ರಾಜ್ಯಗಳಲ್ಲಿ ₹5,000 ಕೋಟಿ ವೆಚ್ಚದ ‘ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ’ (BRO) ನಿರ್ಮಿತ ರಸ್ತೆಗಳು, ಸೇತುವೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಲೋಕಾರ್ಪಣೆಗೊಳಿಸಿದರು.

    ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO)ಯ ಬಗ್ಗೆ:

    • ಸ್ಥಾಪನೆ:- ಇದನ್ನು 1960 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದರು.
    • ಉದ್ದೇಶ:- ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ಸಂವಹನ ಜಾಲದ ತ್ವರಿತ ಅಭಿವೃದ್ಧಿಯನ್ನು ಸಮನ್ವಯಗೊಳಿಸುವುದು.
    • ಆಡಳಿತಾತ್ಮಕ ನಿಯಂತ್ರಣ:- ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಮಹತ್ವ:- ಮೂಲಸೌಕರ್ಯಗಳ ಬದ್ಧ, ಸಮರ್ಪಿತ ಮತ್ತು ವೆಚ್ಚ-ಪರಿಣಾಮಕಾರಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಮೂಲಕ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸುವುದು.
    • ಕಾರ್ಯವಿಧಾನ:- ಇದು ಗಡಿ ರಸ್ತೆ ಕಾರ್ಯಪಡೆಗಳು (BRTFs) ಮತ್ತು ವಿವಿಧ ಯೋಜನೆಗಳ ಮೂಲಕ (ಉದಾಹರಣೆಗೆ: ಪ್ರಾಜೆಕ್ಟ್ ಹಿಮಾಂಕ್, ಪ್ರಾಜೆಕ್ಟ್ ವಿಜಯಕ್, ಪ್ರಾಜೆಕ್ಟ್ ದಂತಕ್, ಪ್ರಾಜೆಕ್ಟ್ ವರ್ತಕ್, ಪ್ರಾಜೆಕ್ಟ್ ಉದಯಕ್ ಇತ್ಯಾದಿ) ಕಾರ್ಯನಿರ್ವಹಿಸುತ್ತದೆ.

    ರೆಲೋಸ್ (RELOS) ಒಪ್ಪಂದ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ರಷ್ಯಾದ ಸಂಸತ್ತಿನ ಕೆಳಮನೆಯು ಭಾರತದೊಂದಿಗೆ ಮಾಡಿಕೊಂಡಿರುವ “ಪರಸ್ಪರ ಸಾರಿಗೆ ಮತ್ತು ಸರಬರಾಜು ಬೆಂಬಲ ವಿನಿಮಯ (RELOS) ಒಪ್ಪಂದ”ವನ್ನು ಅಧಿಕೃತವಾಗಿ ಅನುಮೋದಿಸಲಾಗಿದೆ.
    • ಭಾರತವು ಈ ಹಿಂದೆ ಅಮೆರಿಕ, ಯುನೈಟೆಡ್ ಕಿಂಗಡೋಮ್, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳೊಂದಿಗೆ ಮಾಡಿಕೊಂಡಿರುವ ಸಾರಿಗೆ ಮತ್ತು ಸರಬರಾಜು ಒಪ್ಪಂದಗಳಂತೆಯೇ ಈ ‘ರೆಲೋಸ್’ ಒಪ್ಪಂದವೂ ಸಹ ಕಾರ್ಯನಿರ್ವಹಿಸುತ್ತದೆ.

    ಭಾರತ-ರಷ್ಯಾ ಪರಸ್ಪರ ಸಾರಿಗೆ ಮತ್ತು ಸರಬರಾಜು ಬೆಂಬಲ ವಿನಿಮಯ (RELOS) ಒಪ್ಪಂದದ ಬಗ್ಗೆ:

    • ಇದೊಂದು ದ್ವಿಪಕ್ಷೀಯ ಸೇನಾ ಸಾರಿಗೆ ಮತ್ತು ಸರಬರಾಜು ಒಪ್ಪಂದವಾಗಿದೆ. 
    • ಇದು ಎರಡೂ ದೇಶಗಳ ಸೇನಾ ವಿಮಾನಗಳು, ಹಡಗುಗಳು ಮತ್ತು ಸಿಬ್ಬಂದಿಗೆ ಪರಸ್ಪರರ ಸೇನಾ ನೆಲೆಗಳನ್ನು ಇಂಧನ ತುಂಬಿಕೆ, ನಿರ್ವಹಣೆ, ಬಿಡಿಭಾಗಗಳ ಪೂರೈಕೆ, ತರಬೇತಿ, ಜಂಟಿ ಸಮರಾಭ್ಯಾಸಗಳು, ಮಾನವೀಯ ಕಾರ್ಯಾಚರಣೆಗಳು ಮತ್ತು ವಿಪತ್ತು ಪರಿಹಾರಕ್ಕಾಗಿ ಬಳಸಲು ಅವಕಾಶ ಕಲ್ಪಿಸುತ್ತದೆ.
    • ಇದು ಕಾಗದದ ಕಾರ್ಯವ್ಯವಹಾರವನ್ನು ಕಡಿಮೆ ಮಾಡುವ ಮೂಲಕ ಸಾರಿಗೆ ಮತ್ತು ಸರಬರಾಜು ಪ್ರಕ್ರಿಯೆಯನ್ನು ಸುಗಮಗೊಳಿಸಿ, ತ್ವರಿತ ಬೆಂಬಲವನ್ನು ಖಚಿತಪಡಿಸುತ್ತದೆ ಮತ್ತು ವೆಚ್ಚಗಳ ಹಂತ ಹಂತದ ಸಮನ್ವಯ/ನಿರವಸ್ಥೆಯನ್ನು ಅನುಮತಿಸುತ್ತದೆ.”
  • ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (CAG) ವರದಿಯು ಕರ್ನಾಟಕದ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿನ ದುರ್ಬಲತೆಗಳು ಹಾಗೂ ಅಸಮರ್ಪಕ ಸಿದ್ಧತೆಗಳನ್ನು ಎತ್ತಿ ತೋರಿಸಿದೆ.

    ಸಿಎಜಿ ವರದಿಯಲ್ಲಿರುವ ಪ್ರಮುಖ ಅಂಶಗಳು:

    • ಈ ವರದಿಯು 2017-18 ರಿಂದ 2022-23 ರವರೆಗಿನ ಅವಧಿಯಲ್ಲಿ ವಿಪತ್ತುಗಳ ನಿರ್ವಹಣೆ ಮತ್ತು ಅಪಾಯ ತಗ್ಗಿಸುವಿಕೆಯಲ್ಲಿನ ಪ್ರಯತ್ನಗಳನ್ನು ವಿಶ್ಲೇಷಿಸಿದೆ.
    • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (KSDMA) 2008 ರಲ್ಲಿ ಸ್ಥಾಪನೆಯಾಗಿದ್ದರೂ, ‘ರಾಜ್ಯ ವಿಪತ್ತು ನಿರ್ವಹಣಾ ನೀತಿ, 2020’ ಅನ್ನು 12 ವರ್ಷಗಳ ವಿಳಂಬದ ನಂತರ ಮಾತ್ರ ಪ್ರಕಟಿಸಲಾಗಿದೆ ಎಂದು ವರದಿಯು ಎತ್ತಿ ತೋರಿಸಿದೆ.
    • ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲದಿರುವುದು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.
    • ವಿಪತ್ತು ಸ್ಪಂದನಾ ಪಡೆಯ ಘಟಕಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ 67% ರಿಂದ 96% ರಷ್ಟು ಬೃಹತ್ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಈ ಘಟಕಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ತೊಂದರೆಗಳನ್ನು ಎದುರಿಸುತ್ತಿವೆ.
    • ಪ್ರವಾಹದ ಅಪಾಯಕ್ಕಾಗಿ “ರಾಜ್ಯ ಕ್ರಿಯಾ ಯೋಜನೆ”ಯನ್ನು 2021 ರಲ್ಲಿ ರೂಪಿಸಲಾಗಿದ್ದರೂ, ನಿರ್ಣಾಯಕ ವಲಯಗಳಲ್ಲಿ ಪ್ರವಾಹ ನಿರ್ವಹಣೆಗಾಗಿ ಅಗತ್ಯ ಸಿದ್ಧತೆಗಳ ಕೊರತೆಯಿದೆ ಎಂದು ಸಿಎಜಿ ಪತ್ತೆಹಚ್ಚಿದೆ.
    • ಬೆಂಗಳೂರಿನಲ್ಲಿ ಅಳವಡಿಸಲಾಗಿರುವ 100 ನೀರಿನ ಮಟ್ಟ ಅಳೆಯುವ ಸಂವೇದಕಗಳ ಪೈಕಿ 49 ಸಂವೇದಕಗಳು ಡಿಸೆಂಬರ್ 2023 ರ ವೇಳೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡುಬಂದಿದೆ. ಅಲ್ಲದೆ, ರಾಜ್ಯವು ಪ್ರವಾಹ ಮೂಲಸೌಕರ್ಯಕ್ಕಾಗಿ ಯಾವುದೇ ಕಾನೂನು ಚೌಕಟ್ಟನ್ನು ಸ್ಥಾಪಿಸಿಲ್ಲ.
  • ರಾಷ್ಟ್ರೀಯ ಗುಪ್ತಚರ ಜಾಲ (NATGRID) | 11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF) | ಸರಸ್ ಆಹಾರ ಮೇಳ, 2025

    ರಾಷ್ಟ್ರೀಯ ಗುಪ್ತಚರ ಜಾಲ (NATGRID)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್) ಪ್ರತಿ ತಿಂಗಳು ಸುಮಾರು 45,000 ವಿನಂತಿಗಳನ್ನು ಸ್ವೀಕರಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳಿಂದ ಈ ವ್ಯವಸ್ಥೆಯ ಬಳಕೆಯು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.

    ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್‌)ದ ಬಗ್ಗೆ:

    • ಇದು 2008ರ 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಅಭಿವೃದ್ಧಿಪಡಿಸಲಾದ ನೈಜ-ಸಮಯದ ಗುಪ್ತಚರ ಮಾಹಿತಿ ಮತ್ತು ದತ್ತಾಂಶ ಪ್ರವೇಶ ವೇದಿಕೆಯಾಗಿದೆ.
    • ಉದ್ದೇಶ:- ವಿವಿಧ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ತಡೆರಹಿತ ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುವುದು.
    • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ದತ್ತಾಂಶಗಳ ಕ್ರೂಢೀಕರಣ:- ಇದು ಬ್ಯಾಂಕ್ ವಹಿವಾಟುಗಳು, ಟೆಲಿಕಾಂ ಬಳಕೆ, ಪಾಸ್‌ಪೋರ್ಟ್/ವಲಸೆ ದಾಖಲೆಗಳು, ತೆರಿಗೆ ಗುರುತಿನ ಸಂಖ್ಯೆಗಳು (PAN), ಪೊಲೀಸ್ ಪ್ರಥಮ ಮಾಹಿತಿ ವರದಿಗಳು (CCTNS/FIRs) ಮತ್ತು ಇತರ ಇ-ಆಡಳಿತ ಮೂಲಗಳನ್ನೊಳಗೊಂಡ 20ಕ್ಕೂ ಹೆಚ್ಚು ವಿಭಾಗಗಳ ನಾಗರಿಕ ಹಾಗೂ ವಾಣಿಜ್ಯ ದತ್ತಾಂಶಗಳನ್ನು ಕ್ರೂಢೀಕರಿಸುತ್ತದೆ.
    • ದತ್ತಾಂಶ ಪ್ರವೇಶಾವಕಾಶ:- ಆರಂಭದಲ್ಲಿ ಪ್ರವೇಶವನ್ನು 
    1. ಗುಪ್ತಚರ ಕಚೇರಿ (IB), 
    2. ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW), 
    3. ರಾಷ್ಟ್ರೀಯ ತನಿಖಾ ಸಂಸ್ಥೆ (NIA), 
    4. ಜಾರಿ ನಿರ್ದೇಶನಾಲಯ (ED), 
    5. ಹಣಕಾಸು ಗುಪ್ತಚರ ಘಟಕ (FIU), 
    6. ಮಾದಕ ದ್ರವ್ಯ ನಿಯಂತ್ರಣ ಕಚೇರಿ (NCB),
    7. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂತಾದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು.
    • ಪ್ರಸ್ತುತ, ನ್ಯಾಟ್‌ಗ್ರಿಡ್ ದತ್ತಾಂಶಗಳ ಪ್ರವೇಶಾವಕಾಶವನ್ನು ಪೊಲೀಸ್ ಅಧೀಕ್ಷಕರ (SP) ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ.

    ನ್ಯಾಟ್‌ಗ್ರಿಡ್‌ನ ಮಹತ್ವ:

    • ಭಯೋತ್ಪಾದನಾ ನಿಗ್ರಹ:- ವ್ಯಕ್ತಿಗಳ ಪ್ರಯಾಣದ ಮಾದರಿ, ಹಣಕಾಸು ವಹಿವಾಟು, ಟೆಲಿಕಾಂ ದತ್ತಾಂಶ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪರಸ್ಪರ ವಿಶ್ಲೇಷಿಸುವ ಮೂಲಕ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚುವ ಹಾಗೂ ಹತ್ತಿಕ್ಕುವ ಸಾಮರ್ಥ್ಯವನ್ನು ನ್ಯಾಟ್‌ಗ್ರಿಡ್ ವೃದ್ಧಿಸುತ್ತದೆ.
    • ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಸುಧಾರಣೆ: ಸಂಘಟಿತ ಅಪರಾಧ, ಮಾದಕ ದ್ರವ್ಯ ಜಾಲಗಳು, ಮಾನವ ಅಕ್ರಮ ಸಾಗಣೆ, ಸೈಬರ್ ಅಪರಾಧ, ನಕಲಿ ನೋಟಿನ ಜಾಲ ಮತ್ತು ಗಡಿಯಾಚೆಗಿನ ಅಕ್ರಮ ಸಾಗಣೆಗೆ ಸಂಬಂಧಿಸಿದ ತನಿಖೆಗಳಿಗೆ ಈ ವೇದಿಕೆಯು ವ್ಯವಸ್ಥಿತ ನೆರವು ನೀಡುತ್ತದೆ.

    11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)ದ 11ನೇ ಆವೃತ್ತಿಯು ಹರಿಯಾಣದ ಪಂಚಕುಳದಲ್ಲಿ ಆರಂಭವಾಯಿತು.

    ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬದ ಬಗ್ಗೆ:

    • ಪ್ರಾರಂಭ:- ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
    • ಇದು ವೈಜ್ಞಾನಿಕ ವಿನಿಮಯ, ನಾವೀನ್ಯತೆ, ಜನಸಂಪರ್ಕ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ.
    • 2025ರ ಧ್ಯೇಯವಾಕ್ಯ:- “ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ”

    IISF, 2025 ಐದು ಪ್ರಮುಖ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತದೆ:

    • ವಾಯುವ್ಯ ಭಾರತ ಮತ್ತು ಹಿಮಾಲಯ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ;
    • ಸಮಾಜ ಮತ್ತು ಶಿಕ್ಷಣಕ್ಕಾಗಿ ವಿಜ್ಞಾನ;
    • ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತ;
    • ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ;
    • ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆ.

    ಸರಸ್ ಆಹಾರ ಮೇಳ, 2025

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಸುಂದರ್ ನರ್ಸರಿಯಲ್ಲಿ ಆಯೋಜಿಸಲಾದ ‘ಸರಸ್ ಆಹಾರ ಮೇಳ, 2025’, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM)ಯ ಅಡಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಒಂದು ಉಜ್ವಲ ಪ್ರದರ್ಶನವಾಗಿ ಮೂಡಿಬಂದಿದೆ.

    ಸರಸ್ ಆಹಾರ ಮೇಳ, 2025 ರ ಬಗ್ಗೆ:

    • ಈ ಮೇಳವು ಹರಿಯಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 62 ಮಳಿಗೆಗಳಲ್ಲಿ 500 ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡಿತ್ತು.
    • ಇದು ಮಹಿಳಾ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತದಾದ್ಯಂತ ಇರುವ ಸ್ವಸಹಾಯ ಸಂಘಗಳ ಸುಮಾರು 300 “ಲಖ್ಪತಿ ದೀದಿಯರು” ಈ ಮೇಳದಲ್ಲಿ ವಿವಿಧ ಆಹಾರ ಪದಾರ್ಥ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಸರಸ್ ಅಜೀವಿಕ ಮೇಳದ ಬಗ್ಗೆ:

    • ಆಯೋಜಕರು:- ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದನ್ನು ಆಯೋಜಿಸುತ್ತದೆ.
    • ಇದು ಗ್ರಾಮೀಣ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪ್ರಮುಖ ಮಾರುಕಟ್ಟೆ ಮಾನ್ಯತೆಯನ್ನು ಪಡೆಯಲು ಒಂದು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.
    • ಮುಚ್ಚಳಿಕರಣ (ಪ್ಯಾಕೇಜಿಂಗ್), ವಿನ್ಯಾಸ, ಸಂವಹನ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳ ಕುರಿತಾದ ಕಾರ್ಯಾಗಾರಗಳ ಮೂಲಕ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ದೇಶ-ವಿದೇಶಗಳ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಕೌಶಲಗಳನ್ನು ಈ ಮೇಳಗಳು ಅವರಿಗೆ ಒದಗಿಸುತ್ತವೆ.
  • ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025

    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ‘ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

    ಈ ಮಸೂದೆಯ ಪ್ರಮುಖ ಅಂಶಗಳು:

    • ಸದಸ್ಯರ ನಾಮನಿರ್ದೇಶನ:- ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ಒಬ್ಬ ವ್ಯಕ್ತಿ ಮತ್ತು ಒಬ್ಬ ಮಹಿಳೆಯನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಉದ್ದೇಶಿಸಿದೆ.
    • ಉದ್ದೇಶ:- ಸರ್ಕಾರದಿಂದ ಹೊಸ ದತ್ತಾಂಶ ಅಥವಾ ಮಾಹಿತಿಯನ್ನು ಸ್ವೀಕರಿಸಿದ ನಂತರ, ಪರಿಶಿಷ್ಟ ಜಾತಿಗಳ ಉಪ -ವರ್ಗೀಕರಣದ ಮೀಸಲಾತಿ ಶೇಕಡಾವಾರು ಪ್ರಮಾಣದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧಿಕಾರ ನೀಡುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ.
  • ವರದಕ್ಷಿಣೆ ವಿರೋಧಿ ಕಾನೂನುಗಳು | ಪರಿಶೀಲನೆಯ ನಂತರವಷ್ಟೇ ಸಿಎಎ (CAA) ಅಡಿಯಲ್ಲಿ ಪೌರತ್ವ: ಸರ್ವೋಚ್ಚ ನ್ಯಾಯಾಲಯ | ಪಕ್ಷಾಂತರ ನಿಷೇಧ ಕಾಯ್ದೆ

    ವರದಕ್ಷಿಣೆ ವಿರೋಧಿ ಕಾನೂನುಗಳು

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ವರದಕ್ಷಿಣೆ ವಿರೋಧಿ ಕಾನೂನುಗಳ ಜಾರಿಯನ್ನು ಬಲಪಡಿಸಲು ಸರ್ವೋಚ್ಚ ನ್ಯಾಯಾಲಯವು ವ್ಯವಸ್ಥಿತ ನಿರ್ದೇಶನಗಳನ್ನು ನೀಡಿದೆ.

    ಭಾರತದಲ್ಲಿ ವರದಕ್ಷಿಣೆ ಪ್ರಕರಣಗಳು:

    • ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)“ಭಾರತದಲ್ಲಿ ಅಪರಾಧಗಳು, 2023” ವರದಿಯು, 2022 ರಲ್ಲಿ ದಾಖಲಾಗಿದ್ದ 13,479 ಪ್ರಕರಣಗಳಿಗೆ ಹೋಲಿಸಿದರೆ 2023 ರಲ್ಲಿ ‘ವರದಕ್ಷಿಣೆ ನಿಷೇಧ ಕಾಯ್ದೆ,1961’ ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ 14% ರಷ್ಟು ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15,489 ಕ್ಕೆ ತಲುಪಿದೆ ಎಂದು ದೃಢಪಡಿಸಿದೆ. ಇದರೊಂದಿಗೆ ದೇಶದಾದ್ಯಂತ 6,156 ವರದಕ್ಷಿಣೆ ಸಂಬಂಧಿತ ಸಾವುಗಳು ಸಂಭವಿಸಿವೆ.
    • ಉತ್ತರ ಪ್ರದೇಶವು 7,151 ಪ್ರಕರಣಗಳು ಮತ್ತು 2,122 ಸಾವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಬಿಹಾರ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ.

    ಭಾರತದಲ್ಲಿ ಕಾನೂನು ಸ್ಥಿತಿಗತಿ:

    • ಭಾರತದ ಕಾನೂನುಗಳ ಅಡಿಯಲ್ಲಿ ವರದಕ್ಷಿಣೆ ಪದ್ಧತಿಯನ್ನು ದೀರ್ಘಕಾಲದಿಂದ ನಿಷೇಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು:

    ವರದಕ್ಷಿಣೆ ನಿಷೇಧ ಕಾಯ್ದೆ, 1961

    • ಉದ್ದೇಶ:- ವರದಕ್ಷಿಣೆ ನೀಡುವುದನ್ನು ಅಥವಾ ಪಡೆಯುವುದನ್ನು ನಿಷೇಧಿಸುವುದು.
    • ಜೈಲು ಶಿಕ್ಷೆ: ಈ ಕಾನೂನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ.ಗಳಿಗಿಂತ ಕಡಿಮೆಯಿಲ್ಲದ ದಂಡವನ್ನು ವಿಧಿಸಲು ಅವಕಾಶವಿದೆ.

    ಪರಿಶೀಲನೆಯ ನಂತರವಷ್ಟೇ ಸಿಎಎ (CAA) ಅಡಿಯಲ್ಲಿ ಪೌರತ್ವ: ಸರ್ವೋಚ್ಚ ನ್ಯಾಯಾಲಯ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಅಡಿಯಲ್ಲಿ ಪೌರತ್ವವು ‘ಸ್ವಯಂಚಾಲಿತ’ ಪ್ರಕ್ರಿಯೆಯಲ್ಲ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟಪಡಿಸಿದೆ. 
    • ಅರ್ಜಿದಾರರು ನಾಗರಿಕತೀಕರಣದ ಎಲ್ಲಾ ಶಾಸನಬದ್ಧ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಬೇಕು ಮತ್ತು ಕೇಂದ್ರ ಸರ್ಕಾರವು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಘನ ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಪ್ರಮುಖ ಲಕ್ಷಣಗಳು:

    • ಉದ್ದೇಶ ಮತ್ತು ಗುರಿ:- ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ನಿರ್ದಿಷ್ಟ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಲು ಈ ಕಾಯ್ದೆಯು 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ.
    • ಅರ್ಹ ಸಮುದಾಯಗಳು:- ಈ ಕಾಯ್ದೆಯು ನಿರ್ದಿಷ್ಟವಾಗಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಎಂಬ ಆರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳನ್ನು ಒಳಗೊಂಡಿದೆ.
    • ಈ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಮಾನ್ಯತೆ ನೀಡಿದ ಪ್ರಯಾಣ ದಾಖಲೆಗಳಿಲ್ಲದೆ ಅಥವಾ ಅವಧಿ ಮುಗಿದ ದಾಖಲೆಗಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದರೆ, ಅಂತಹವರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ.
    • ‘ಅಕ್ರಮ ವಲಸಿಗ’ ಸ್ಥಾನಮಾನದಿಂದ ವಿನಾಯಿತಿ: ಇಂತಹ ವ್ಯಕ್ತಿಗಳನ್ನು ಈ ಕಾಯ್ದೆಯಡಿ ‘ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುವುದಿಲ್ಲ. ಇದು ಅವರು ನಾಗರಿಕತೀಕರಣದ ಮೂಲಕ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
    • ಈ ಗುಂಪುಗಳಿಗೆ ನಾಗರಿಕತೀಕರಣದ ಮೂಲಕ ಪೌರತ್ವ ಪಡೆಯಲು ಭಾರತದಲ್ಲಿ ವಾಸಿಸಬೇಕಾದ ಅಗತ್ಯ ಅವಧಿಯನ್ನು 11 ವರ್ಷಗಳಿಂದ 5 ವರ್ಷಗಳಿಗೆ ಇಳಿಸಲಾಗಿದೆ.

    ಅನ್ವಯವಾಗದ ಪ್ರದೇಶಗಳು (ವಿನಾಯಿತಿಗಳು):

    ಈ ಕಾಯ್ದೆಯು ಈ ಕೆಳಗಿನ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ:

    • ಸಂವಿಧಾನದ 6ನೇ ಅನುಸೂಚಿಯಲ್ಲಿ ಸೇರಿಸಲ್ಪಟ್ಟ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶಗಳು.
    • ಆಂತರಿಕ ಪ್ರವೇಶ ಅನುಮತಿ” (ILP- ಇನ್ನರ್ ಲೈನ್ ಪರ್ಮಿಟ್) ವ್ಯವಸ್ಥೆಯಡಿ ಬರುವ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳ ಪ್ರದೇಶಗಳು.

    ಭಾರತೀಯ ಪೌರತ್ವ ಪಡೆಯುವ ಮಾರ್ಗಗಳು:

    ಸಾಂವಿಧಾನಿಕ ಅಡಿಪಾಯ:- ಭಾರತೀಯ ಸಂವಿಧಾನದ 2ನೇ ಭಾಗದ 5 ರಿಂದ 11 ನೇ ವಿಧಿಗಳು ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಆರಂಭಿಕ ಚೌಕಟ್ಟನ್ನು ರೂಪಿಸುತ್ತವೆ:

    • ವಿಧಿ 5:- ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಭಾರತದಲ್ಲಿ ಶಾಶ್ವತವಾಗಿ ವಾಸಸ್ಥಳ (Domicile) ಹೊಂದಿದ್ದ ವ್ಯಕ್ತಿಗಳಿಗೆ ಪೌರತ್ವವನ್ನು ನೀಡುತ್ತದೆ.
    • ವಿಧಿ 6:- ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪೌರತ್ವವನ್ನು ಕಲ್ಪಿಸುತ್ತದೆ.
    • ವಿಧಿ 7:- ಪಾಕಿಸ್ತಾನಕ್ಕೆ ವಲಸೆ ಹೋಗಿ ನಂತರ ಭಾರತಕ್ಕೆ ಮರಳಿದವರ ಪೌರತ್ವದ ಬಗ್ಗೆ ತಿಳಿಸುತ್ತದೆ.
    • ವಿಧಿ 8:- ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳ ಪೌರತ್ವದ ಹಕ್ಕುಗಳನ್ನು ಒದಗಿಸುತ್ತದೆ.
    • ವಿಧಿ 9:- ದ್ವಿಪೌರತ್ವವನ್ನು ನಿಷೇಧಿಸುತ್ತದೆ; ಒಬ್ಬ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಬೇರೆ ದೇಶದ ಪೌರತ್ವವನ್ನು ಪಡೆದರೆ, ಅವರು ಭಾರತೀಯ ಪೌರತ್ವವನ್ನು ಕಳೆದುಕೊಳ್ಳುತ್ತಾರೆ.
    • ವಿಧಿ 10:- ಕಾನೂನಿನ ಅಡಿಯಲ್ಲಿ ರದ್ದುಗೊಳಿಸದ ಹೊರತು ಅಸ್ತಿತ್ವದಲ್ಲಿರುವ ಪೌರರು ಪೌರತ್ವದ ಹಕ್ಕುಗಳನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ.
    • ವಿಧಿ 11:- ಪೌರತ್ವದ ಹಕ್ಕನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ.

    ಶಾಸನಬದ್ಧ ನಿಬಂಧನೆಗಳು: ಪೌರತ್ವ ಕಾಯ್ದೆ, 1955

    ಇದು ಭಾರತೀಯ ಪೌರತ್ವವನ್ನು ಪಡೆಯುವ ಮತ್ತು ರದ್ದುಗೊಳಿಸುವ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಪೌರತ್ವ ಪಡೆಯುವ ಪ್ರಮುಖ ವಿಧಾನಗಳು:

    1. ಜನನದ ಮೂಲಕ (ವಿಭಾಗ 3)
    2. ವಂಶಪಾರಂಪರ್ಯವಾಗಿ (ವಿಭಾಗ 4)
    3. ನೋಂದಣಿ ಮೂಲಕ (ವಿಭಾಗ 5)
    4. ನಾಗರಿಕತೀಕರಣದ ಮೂಲಕ (ವಿಭಾಗ 6)
    5. ಪ್ರದೇಶಗಳ ಸೇರ್ಪಡೆಯ ಮೂಲಕ (ವಿಭಾಗ 7)

    ಪಕ್ಷಾಂತರ ನಿಷೇಧ ಕಾಯ್ದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಲೋಕಸಭೆಯಲ್ಲಿ “ಸಂವಿಧಾನ (ತಿದ್ದುಪಡಿ) ಮಸೂದೆ, 2025 (10ನೇ ಅನುಸೂಚಿಯ ತಿದ್ದುಪಡಿ)” ಎಂಬ ಶೀರ್ಷಿಕೆಯ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಲಾಗಿದೆ. 
    • ಸಾಮಾನ್ಯವಾಗಿ ಕರೆಯಲ್ಪಡುವ ‘ಪಕ್ಷಾಂತರ ನಿಷೇಧ ಕಾಯ್ದೆ’ಯು ಸಂವಿಧಾನದ 10ನೇ ಅನುಸೂಚಿಯನ್ನು, 52ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1985 ರ ಮೂಲಕ ಭಾರತದ ಸಂವಿಧಾನಕ್ಕೆ ಸೇರಿಸಲಾಯಿತು.

    ವಿಪ್ (Whip) ನ ಬಗ್ಗೆ:

    • ‘ವಿಪ್’ ಅಥವಾ ‘ಸಚೇತಕ’ ಎನ್ನುವುದು ಸದನದಲ್ಲಿರುವ ರಾಜಕೀಯ ಪಕ್ಷದ ಸದಸ್ಯರು ಪಕ್ಷದ ನಿರ್ದಿಷ್ಟ ನಿರ್ದೇಶನಕ್ಕೆ ಬದ್ಧವಾಗಿರಲು ಹೊರಡಿಸುವ ಆದೇಶವಾಗಿದೆ.
    • ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಆಯಾ ಪಕ್ಷದ ನಿಲುವಿಗೆ ಅನುಗುಣವಾಗಿ ಮಸೂದೆಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ವಿಪ್ ಜಾರಿಗೊಳಿಸುತ್ತವೆ.
    • ಒಮ್ಮೆ ವಿಪ್ ಜಾರಿಯಾದ ನಂತರ, ಪ್ರತಿ ಪಕ್ಷದ ಸಂಸದರು ಕಡ್ಡಾಯವಾಗಿ ಅದನ್ನು ಪಾಲಿಸಬೇಕು; ತಪ್ಪಿದಲ್ಲಿ ಅವರು ಸಂಸತ್ತಿನಲ್ಲಿ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ.
    • ವಿಪ್ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ, ಆದರೆ ಇದನ್ನು ಒಂದು ಸಂಸದೀಯ ಸಂಪ್ರದಾಯವೆಂದು ಪರಿಗಣಿಸಲಾಗುತ್ತದೆ.
    • ರಾಜಕೀಯ ಪಕ್ಷಗಳು ವಿಪ್ ಜಾರಿಗೊಳಿಸಲು ಸದನದ ಸದಸ್ಯರ ಪೈಕಿ ಒಬ್ಬ ಹಿರಿಯ ಸದಸ್ಯರನ್ನು ನೇಮಿಸುತ್ತವೆ  ಈ ಸದಸ್ಯರನ್ನು ‘ಮುಖ್ಯ ಸಚೇತಕ’ (Chief Whip) ಎಂದು ಕರೆಯಲಾಗುತ್ತದೆ ಮತ್ತು ಇವರಿಗೆ ಹೆಚ್ಚುವರಿ ಸಚೇತಕರು ನೆರವಾಗುತ್ತಾರೆ.

    ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ:

    • ರಾಜಕೀಯ ಪಕ್ಷಾಂತರಗಳನ್ನು ತಡೆಗಟ್ಟುವ ಉದ್ದೇಶದಿಂದ ಸಂವಿಧಾನದ 10ನೇ ಅನುಸೂಚಿಯನ್ನು ಅಳವಡಿಸಿಕೊಳ್ಳಲಾಗಿದೆ.
    • ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ:- ರಾಜಕೀಯ ಪಕ್ಷವೊಂದಕ್ಕೆ ಸೇರಿದ ಸಂಸದರು/ಶಾಸಕರು ಈ ಕೆಳಗಿನ ಸಂದರ್ಭಗಳಲ್ಲಿ ಅನರ್ಹಗೊಳ್ಳುತ್ತಾರೆ:
    1. ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದರೆ.
    2. ತಮ್ಮ ರಾಜಕೀಯ ಪಕ್ಷವು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ ಅನರ್ಹಗೊಳ್ಳುತ್ತಾರೆ. 
    3. ಪಕ್ಷೇತರ ಸದಸ್ಯರು ಸದನಕ್ಕೆ ಚುನಾಯಿತರಾದ ನಂತರ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹಗೊಳ್ಳುತ್ತಾರೆ.
    4. ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅನರ್ಹಗೊಳ್ಳುತ್ತಾರೆ.
    5. ಸದಸ್ಯರು ತಮ್ಮ ಪಕ್ಷದಿಂದ ಮುಂಚಿತವಾಗಿ ಅನುಮತಿ ಪಡೆದಿದ್ದರೆ ಅಥವಾ ಮತದಾನದ ನಿಯಮ ಉಲ್ಲಂಘನೆ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ, ಅವರು ಅನರ್ಹಗೊಳ್ಳುವುದಿಲ್ಲ.
    • ವಿಲೀನದ ಸಂದರ್ಭಗಳಲ್ಲಿ ವಿನಾಯಿತಿಗಳು:- ಮೂಲ ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡಾಗ ಅಂತಹ ಸದಸ್ಯರಿಗೆ ಅನರ್ಹತೆಯಿಂದ ವಿನಾಯಿತಿ ನೀಡಲಾಗುತ್ತದೆ.
    • ಈ ಸದಸ್ಯರು ತಾವು ವಿಲೀನಗೊಂಡ ಪಕ್ಷದ ಸದಸ್ಯರಾಗಿರಬೇಕು, ಅಥವಾ
    • ಅವರು ಅಂತಹ ವಿಲೀನವನ್ನು ಒಪ್ಪಿಕೊಳ್ಳದೆ ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿರಬೇಕು.
    • ತೀರ್ಪು ನೀಡುವ ಅಧಿಕಾರ:- ಸದಸ್ಯರನ್ನು ಸದನದಿಂದ ಅನರ್ಹಗೊಳಿಸುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವು ಆಯಾ ಸದನದ ಸಭಾಪತಿ ಅಥವಾ ಸಭಾಧ್ಯಕ್ಷರಿಗೆ ಇರುತ್ತದೆ.
  • ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025

    ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ವಿಧಾನಸಭೆಯು ಬಹುಚರ್ಚಿತ ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ಅನ್ನು ಅಂಗೀಕರಿಸಿದೆ.

    ಮಸೂದೆಯ ಪ್ರಮುಖ ಲಕ್ಷಣಗಳು:

    • ಧ್ಯೇಯೋದ್ದೇಶ:- 17% ಮೀಸಲಾತಿ ಹಂಚಿಕೆಯನ್ನು ಹೊಂದಿರುವ 101 ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
    • ಮೀಸಲಾತಿ ಹಂಚಿಕೆ:ಈ ಮಸೂದೆಯ ಅನ್ವಯ, 
    1. ಪ್ರವರ್ಗ- ಎ (16 ಜಾತಿಗಳನ್ನೊಳಗೊಂಡ ಅತೀ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
    2. ಪ್ರವರ್ಗ- ಬಿ (19 ಜಾತಿಗಳನ್ನೊಳಗೊಂಡ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
    3. ಪ್ರವರ್ಗ- ಸಿ (63 ಜಾತಿಗಳನ್ನೊಳಗೊಂಡ ಸ್ಪೃಶ್ಯರು)- 5% ರಷ್ಟು ಮೀಸಲಾತಿ ಹೊಂದಿದೆ.
    • ವರ್ಗೀಕರಿಸದ ಜಾತಿಗಳು:- ಅಂತೆಯೇ, ಈ ಮಸೂದೆಯಲ್ಲಿ ಯಾವುದೇ ವರ್ಗಕ್ಕೆ ಸೇರಿಸದ 3 ಪರಿಶಿಷ್ಟ ಜಾತಿಗಳಾದ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಗಳನ್ನು ಗುರುತಿಸಲಾಗಿದೆ. ಇವುಗಳು ತಮ್ಮ ಜಾತಿ ಪ್ರಮಾಣಪತ್ರಗಳ ಆಧಾರದ ಮೇಲೆ ಪ್ರವರ್ಗ- ಎ ಅಥವಾ ಪ್ರವರ್ಗ- ಬಿ ಯ ಅಡಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಲು ಅರ್ಹವಾಗಿರುತ್ತವೆ.
    • ನಾಗಮೋಹನ್ ದಾಸ್ ಆಯೋಗದ ವರದಿ:- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು, ಪರಿಶಿಷ್ಟ ಜಾತಿಗಳ ವಿವಿಧ ಉಪ-ಗುಂಪುಗಳ ನಡುವಿನ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಶಿಫಾರಸುಗಳೊಂದಿಗೆ ಈ ವರ್ಷದ ಆಗಸ್ಟ್ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
    • ಅನುಷ್ಠಾನ:- ಮೀಸಲಾತಿ ಸೌಲಭ್ಯಗಳ ನ್ಯಾಯೋಚಿತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಆಯೋಗದ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದಿಸಿ, ಪರಿಶಿಷ್ಟ ಜಾತಿಗಳ ನಡುವೆ ಈ ಉಪ -ವರ್ಗೀಕರಣವನ್ನು ಜಾರಿಗೆ ತಂದಿದೆ.
  • ಗೋವಾ ವಿಮೋಚನಾ ದಿನ | ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025 | ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ) | ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor) | ರಾಟ್ಲೆ ಜಲವಿದ್ಯುತ್ ಯೋಜನೆ | ರಿಸ್ಪಾಂಡ್ (RESPOND) ಬಾಸ್ಕೆಟ್, 2025

    ಗೋವಾ ವಿಮೋಚನಾ ದಿನ

    ಸಾಮಾನ್ಯ ಅಧ್ಯಯನ-1/ ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • 1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡು ಅಧಿಕೃತವಾಗಿ ಭಾರತದೊಂದಿಗೆ ವಿಲೀನಗೊಂಡ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 19 ರಂದು ‘ಗೋವಾ ವಿಮೋಚನಾ ದಿನ’ವನ್ನು ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • ಪೋರ್ಚುಗೀಸರು ಮೊದಲಬಾರಿಗೆ ವಶಪಡಿಸಿಕೊಂಡಿದ್ದು 1510 ರಲ್ಲಿ: ಪೋರ್ಚುಗೀಸರ ನೌಕಾಪಡೆಯ ಮುಖ್ಯಸ್ಥ ಅಲ್ಬುಕರ್ಕ್, ಸ್ಥಳೀಯ ಮುಖ್ಯಸ್ಥ ತಿಮೋಜಿಯ ಸಹಾಯದೊಂದಿಗೆ ಗೋವಾವನ್ನು ವಶಪಡಿಸಿಕೊಂಡನು.
    • ಬಿಜಾಪುರದ “ಆದಿಲ್ ಶಾಹಿಯ” ಪಡೆಗಳು ಗೋವಾವನ್ನು ವಶಪಡಿಸಿಕೊಂಡವು: ಮಳೆಗಾಲದ ಸಮಯದಲ್ಲಿ ಆದಿಲ್ ಶಾಹಿಯ ಪಡೆಗಳು ಗೋವಾವನ್ನು ಪೋರ್ಚುಗೀಸರಿಂದ ಮರುಪಡೆಯುವಲ್ಲಿ ಯಶಸ್ವಿಯಾದವು.
    • ಅಂತಿಮ ವಿಜಯ (ನವೆಂಬರ್ 1510): ಅಲ್ಬುಕರ್ಕ್ ಹೆಚ್ಚಿನ ಸೈನ್ಯದೊಂದಿಗೆ ಮರಳಿ ಬಂದು ಬಿಜಾಪುರ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸಿ ಗೋವಾವನ್ನು ಪೂರ್ಣವಾಗಿ ವಶಪಡಿಸಿಕೊಂಡನು.

    ಪೋರ್ಚುಗೀಸರ ಯಶಸ್ಸಿಗೆ ಕಾರಣಗಳು:

      • ಅತ್ಯುನ್ನತ ನೌಕಾ ಶಕ್ತಿ ಮತ್ತು ಫಿರಂಗಿ ದಳದ ಬಳಕೆ.
      • ಬಿಜಾಪುರ ಸುಲ್ತಾನರ ದುರ್ಬಲ ಆಂತರಿಕ ನಿಯಂತ್ರಣ.
      • ಅತೃಪ್ತ ಸ್ಥಳೀಯ ಗುಂಪುಗಳಿಂದ ದೊರೆತ ಬೆಂಬಲ.
    • ಅಲ್ಬುಕರ್ಕ್‌ನ ಸಮರ್ಥ ನಾಯಕತ್ವ.

    ಪರಿಣಾಮಗಳು:

    • ಗೋವಾ ಭಾರತದಲ್ಲಿರುವ ಪೋರ್ಚುಗೀಸರ ವಸಾಹತುಗಳ (Estado da Índia) ರಾಜಧಾನಿಯಾಯಿತು.
    • ಇದು ಭಾರತದಲ್ಲಿ ಯುರೋಪಿನ ಪ್ರಾದೇಶಿಕ ವಸಾಹತುಶಾಹಿಯ ಆರಂಭಕ್ಕೆ ನಾಂದಿ ಹಾಡಿತು.
    • ಗೋವಾ ವ್ಯಾಪಾರ, ಆಡಳಿತ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು.

    ಗಮನಿಸಿ:- ಯುರೋಪಿನ ವಸಾಹತುಶಾಹಿಗಳಿಂದ ವಶಪಡಿಸಿಕೊಳ್ಳಲ್ಪಟ್ಟ ಭಾರತದ ಮೊದಲ ಭೂಪ್ರದೇಶ ಮತ್ತು ಸ್ವಾತಂತ್ರ್ಯ ಪಡೆದ ಕೊನೆಯ ಪ್ರದೇಶವೂ ಇದೇ ಆಗಿತ್ತು.

    ವಿಮೋಚನೆಯ ಹಿನ್ನೆಲೆ:

    • 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಗೋವಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಹೈದರಾಬಾದ್‌ನಂತಹ ಪ್ರದೇಶಗಳ ವಿಲೀನವು ಸರ್ಕಾರದ ಮುಂದಿದ್ದ ಪ್ರಮುಖ ಸವಾಲುಗಳಾಗಿದ್ದವು.
    • ರಾಜತಾಂತ್ರಿಕ ಪ್ರಯತ್ನಗಳು:- ಗೋವಾವನ್ನು ಶಾಂತಿಯುತವಾಗಿ ಹಸ್ತಾಂತರಿಸುವಂತೆ ಪೋರ್ಚುಗಲ್ ದೇಶವನ್ನು ಮನವೊಲಿಸಲು ಭಾರತ ಸರ್ಕಾರವು ಹಲವಾರು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿತು.
    • ಸುಮಾರು 451 ವರ್ಷಗಳ ಕಾಲ ಗೋವಾವನ್ನು ಆಳಿದ್ದ ಪೋರ್ಚುಗಲ್, ಭಾರತದ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿತು.
    • ಇದು ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ‘ಗೋವಾ ವಿಮೋಚನಾ ಚಳವಳಿ’ಗೆ ಕಾರಣವಾಯಿತು.

    ಆಪರೇಷನ್ ವಿಜಯದ ಬಗ್ಗೆ:

    • ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರವಧಿಯಲ್ಲಿ ಗೋವಾವನ್ನು ಭಾರತದೊಂದಿಗೆ ವಿಲೀನಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿದವು.
    • ಈ ಕಾರ್ಯಾಚರಣೆಯು 36 ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಭೂ, ಜಲ ಮತ್ತು ವಾಯುಪಡೆಗಳ ಸಮನ್ವಯದ ದಾಳಿಗಳನ್ನು ಒಳಗೊಂಡಿತ್ತು.

    ಫಲಿತಾಂಶ:-

    • ಪೋರ್ಚುಗೀಸ್ ಪಡೆಗಳು ಡಿಸೆಂಬರ್ 19, 1961 ರಂದು ಶರಣಾದವು, ಇದರಿಂದಾಗಿ ‘ಗೋವಾ’ವು ದಮನ್ ಮತ್ತು ದಿಯು ಜೊತೆಗೆ ವಿಮೋಚನೆಗೊಂಡಿತು.
    • ಮೇ 30, 1987 ರಂದು ಅಂದಿನ ಕೇಂದ್ರಾಡಳಿತ ಪ್ರದೇಶವನ್ನು ವಿಭಜಿಸಿ, ಗೋವಾವನ್ನು ಭಾರತದ 25ನೇ ರಾಜ್ಯವನ್ನಾಗಿ ಮಾಡಲಾಯಿತು.
    • ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಾಗಿಯೇ ಮುಂದುವರಿದವು.

    ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಹಣಕಾಸು ಸಚಿವರು ಲೋಕಸಭೆಯಲ್ಲಿ ‘ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025’ ಅನ್ನು ಮಂಡಿಸಿದ್ದಾರೆ.

    ಮಸೂದೆಯ ಉದ್ದೇಶ:

    ಈ ಮಸೂದೆಯು ಅಸ್ತಿತ್ವದಲ್ಲಿರುವ ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಕ್ರೂಢೀಕರಿಸಲು  ಪ್ರಸ್ತಾಪಿಸುತ್ತದೆ:

    • ಭದ್ರತಾ ಪತ್ರಗಳ ಒಪ್ಪಂದಗಳು (ನಿಯಂತ್ರಣ) ಕಾಯ್ದೆ, 1956.
    • ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI) ಕಾಯ್ದೆ, 1992.
    • ಠೇವಣಿ ಕಾಯ್ದೆ, 1996 

    ಪ್ರಮುಖ ನಿಬಂಧನೆಗಳು:

    • SEBI ಮಂಡಳಿಯ ರಚನೆಯಲ್ಲಿ ಸುಧಾರಣೆ: SEBI ಮಂಡಳಿಯ ಸದಸ್ಯರ ಸಂಖ್ಯೆಯನ್ನು ಅಧ್ಯಕ್ಷರು ಸೇರಿದಂತೆ ಪ್ರಸ್ತುತ ಇರುವ 9 ರಿಂದ 15ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
    • ಪರಿಷ್ಕೃತ ಮಂಡಳಿಯ ಸಂಯೋಜನೆ: ಮರುರಚನೆಯಾದ ಮಂಡಳಿಯು ಈ ಕೆಳಗಿನ ಸಂಯೋಜನೆಯನ್ನು ಒಳಗೊಂಡಿರುತ್ತದೆ:
      • ಅಧ್ಯಕ್ಷರು
      • ಕೇಂದ್ರ ಸರ್ಕಾರದಿಂದ ನೇಮಕಗೊಂಡ ಇಬ್ಬರು ಅಧಿಕಾರಿಗಳು.
      • ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಒಬ್ಬರು ಪದನಿಮಿತ್ತ ಸದಸ್ಯರು.
      • ಹನ್ನೊಂದು ಇತರ ಸದಸ್ಯರು; ಇವರಲ್ಲಿ ಕನಿಷ್ಠ ಐವರು ಪೂರ್ಣಾವಧಿ ಸದಸ್ಯರಾಗಿರುತ್ತಾರೆ (ಪ್ರಸ್ತುತ ಕೇವಲ ಮೂವರು ಪೂರ್ಣಾವಧಿ ಸದಸ್ಯರಿದ್ದಾರೆ).

    ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI)ಯ ಬಗ್ಗೆ:

    • ಇದು ಭಾರತದ ಭದ್ರತಾ ಪತ್ರಗಳ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರಾಥಮಿಕ ನಿಯಂತ್ರಕ ಸಂಸ್ಥೆಯಾಗಿದೆ.
    • ಇದನ್ನು 1992ರಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಮತ್ತು ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಅಧ್ಯಕ್ಷರು: ತುಹಿನ್ ಕಾಂತ ಪಾಂಡೆ (ಪ್ರಸ್ತುತ).
    • ಪ್ರಧಾನ ಕಚೇರಿ:– ಮುಂಬೈ
    • ಪ್ರಾದೇಶಿಕ ಕಚೇರಿಗಳು:- ನವದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಅಹಮದಾಬಾದ.
    • ಉದ್ದೇಶ:- ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು, ಮಾರುಕಟ್ಟೆ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಭದ್ರತಾ ಪತ್ರಗಳ ಮಾರುಕಟ್ಟೆಯನ್ನು ನಿಯಂತ್ರಿಸುವುದು.

    ಪ್ರಮುಖ ಕಾರ್ಯಗಳು ಮತ್ತು ಅಧಿಕಾರಗಳು:

    • ರಕ್ಷಣಾತ್ಮಕ ಕಾರ್ಯಗಳು: ಆಂತರಿಕ ವ್ಯಾಪಾರ (ಇನ್ಸೈಡರ್ ಟ್ರೇಡಿಂಗ್), ಬೆಲೆ ಅಕ್ರಮಗಳು ಮತ್ತು ವಂಚನೆಯ ಅಭ್ಯಾಸಗಳನ್ನು ತಡೆಗಟ್ಟುವುದು.
    • ಅಭಿವೃದ್ಧಿ ಕಾರ್ಯಗಳು: ಹೂಡಿಕೆದಾರರ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಪಾರದರ್ಶಕತೆಯನ್ನು ಹೆಚ್ಚಿಸಲು ಮಧ್ಯವರ್ತಿಗಳಿಗೆ ತರಬೇತಿ ನೀಡುವುದು.
    • ನಿಯಂತ್ರಕ ಕಾರ್ಯಗಳು: ನಿಯಮಾವಳಿಗಳನ್ನು ರೂಪಿಸುವುದು, ಲೆಕ್ಕಪರಿಶೋಧನೆ ನಡೆಸುವುದು ಮತ್ತು ಮಧ್ಯವರ್ತಿಗಳು ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಮಾರುಕಟ್ಟೆ ಪಾಲುದಾರರನ್ನು ನೋಂದಾಯಿಸುವುದು.

    ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತ ಸರ್ಕಾರವು ನಬಾರ್ಡ್ನ ಸಹಯೋಗದೊಂದಿಗೆ, ದೇಶದಾದ್ಯಂತ ಇರುವ ಎಲ್ಲಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಗುರುತನ್ನು ಏಕೀಕರಿಸುವ ಉದ್ದೇಶದಿಂದ “ಒಂದು ಆರ್.ಆರ್.ಬಿ, ಒಂದು ಲೋಗೋ (ಚಿಹ್ನೆ)” ಉಪಕ್ರಮದ ಅಡಿಯಲ್ಲಿ ಸಾಮಾನ್ಯ ಲೋಗೋವನ್ನು ಅನಾವರಣಗೊಳಿಸಿದೆ. ಇದು ದೇಶದಾದ್ಯಂತ RRBಗಳ ಗುರುತನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

    “ಒಂದು ಆರ್.ಆರ್.ಬಿ, ಒಂದು ಲೋಗೋ” ಉಪಕ್ರಮದ ಬಗ್ಗೆ:

    • ಗುರಿ:- ಇದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಏಕೈಕ ಮತ್ತು ಏಕರೂಪದ ದೃಶ್ಯ ಗುರುತನ್ನುಪರಿಚಯಿಸುವ ಸುಧಾರಣಾ ಕ್ರಮವಾಗಿದೆ.
    • ಜಂಟಿ ಅನುಷ್ಠಾನ:- ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD).

    ಈ ಉಪಕ್ರಮದ ಉದ್ದೇಶಗಳು:

    • ಏಕೀಕೃತ ಗುರುತು:- ಆರ್.ಆರ್.ಬಿ ಗಳನ್ನು ಪ್ರತ್ಯೇಕ ಪ್ರಾದೇಶಿಕ ಘಟಕಗಳಿಗಿಂತ ಹೆಚ್ಚಾಗಿ ಒಂದು ಸಮಗ್ರ ರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿ ಬಿಂಬಿಸುವುದು.
    • ಗ್ರಾಹಕರ ವಿಶ್ವಾಸ:- ಸುಲಭ ಗುರುತಿಸುವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವುದು.
    • ಕಾರ್ಯಾಚರಣೆಯ ಏಕೀಕರಣ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಇತ್ತೀಚಿನ ವಿಲೀನ ಮತ್ತು ಕ್ರೂಢೀಕರಣ ಪ್ರಕ್ರಿಯೆಗೆ ಪೂರಕ ಬೆಂಬಲ ನೀಡುವುದು.
    • ಡಿಜಿಟಲ್ ಸಿದ್ಧತೆ:- ಆಧುನಿಕ ಬ್ಯಾಂಕಿಂಗ್ ಮತ್ತು ಡಿಜಿಟಲ್ ಹಣಕಾಸು ಸೇವೆಗಳಿಗೆ ಅನುಗುಣವಾಗಿ ಆರ್.ಆರ್.ಬಿ ಬ್ರ್ಯಾಂಡಿಂಗ್ ಅನ್ನು ಸಜ್ಜುಗೊಳಿಸುವುದು.

    ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಬಗ್ಗೆ:

    • ಸ್ಥಾಪನೆ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಉದ್ದೇಶ:- ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಥಿಕ ಸಾಲವನ್ನು ವಿಸ್ತರಿಸುವುದು ಮತ್ತು ಸಣ್ಣ ರೈತರು, ಸ್ವಸಹಾಯ ಗುಂಪುಗಳು, ಕುಶಲಕರ್ಮಿಗಳು ಹಾಗೂ ಸೂಕ್ಷ್ಮ, ಸಣ್ಣ, ಮತ್ತು ಮಾಧ್ಯಮ ಕೈಗಾರಿಕೆ (MSME) ಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು.
    • ತ್ರಿಪಕ್ಷೀಯ ಮಾಲೀಕತ್ವದ ಮಾದರಿ:-
      • ಭಾರತ ಸರ್ಕಾರ – 50%
      • ಸಂಬಂಧಿತ ರಾಜ್ಯ ಸರ್ಕಾರ – 15%
      • ಪ್ರಾಯೋಜಕ ಬ್ಯಾಂಕ್ – 35%

    ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor)

    ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ 974 ಕಿಮೀ ಉದ್ದದ ಕರಾವಳಿಯು ಸಮುದ್ರ ತೀರದ ಮರಳಿನಲ್ಲಿರುವ ವಿರಳ ಭೂ ಧಾತುಗಳ (REEs) ಅಪಾರ ಸಂಗ್ರಹದಿಂದಾಗಿ ಕಾರ್ಯತಂತ್ರದ ಮಹತ್ವವನ್ನು ಪಡೆದುಕೊಂಡಿದೆ.

    ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಕಾರಿಡಾರ್ ನ ಬಗ್ಗೆ:

    • ಸ್ಥಳ:- ಆಂಧ್ರಪ್ರದೇಶದ ಉತ್ತರದ ಶ್ರೀಕಾಕುಳಂನಿಂದ ದಕ್ಷಿಣದ ನೆಲ್ಲೂರು ವರೆಗಿನ ನಿರಂತರ ಖನಿಜಯುಕ್ತ ಕರಾವಳಿ ವಲಯ.
    • ದೊರೆಯುವ ಪ್ರಮುಖ ಖನಿಜಗಳು:-
      • ಮೋನಾಜೈಟ್: ಇದು ವಿರಳ ಭೂ ಧಾತುಗಳ (REEs) ಮತ್ತು ಥೋರಿಯಂನ ಪ್ರಾಥಮಿಕ ಮೂಲವಾಗಿದೆ.
      • ಇಲ್ಮನೈಟ್, ರೂಟೈಲ್, ಜಿರ್ಕಾನ್, ಗಾರ್ನೆಟ್ ಮತ್ತು ಸಿಲಿಮನೈಟ್ ಇತ್ಯಾದಿ.

    ಗಮನಿಸಿ:- ಭಾರತದ ಒಟ್ಟು ಮೋನಾಜೈಟ್ ಸಂಗ್ರಹದಲ್ಲಿ ಆಂಧ್ರಪ್ರದೇಶವು 30-35% ರಷ್ಟು ಪಾಲನ್ನು ಹೊಂದಿದೆ.

    ವಿರಳ ಭೂ ಧಾತುಗಳ (REEs) ಬಗ್ಗೆ:

    • ಇವು 17 ಮೂಲವಸ್ತುಗಳ ಒಂದು ಗುಂಪಾಗಿದ್ದು, 15 ಲ್ಯಾಂಥನೈಡ್‌ಗಳು + ಸ್ಕ್ಯಾಂಡಿಯಂ + ಯಟ್ರಿಯಂ ಅನ್ನು ಒಳಗೊಂಡಿವೆ.

    ಇವುಗಳನ್ನು ವಿರಳ ಭೂ ಧಾತುಗಳು (ಅಪರೂಪದ ಲೋಹಗಳು) ಎಂದು ಏಕೆ ಕರೆಯಲಾಗುತ್ತದೆ? 

    ಇವು ಭೂವೈಜ್ಞಾನಿಕವಾಗಿ ಹೇರಳವಾಗಿ ದೊರೆತರೂ, ಈ ಕೆಳಗಿನ ಕಾರಣಗಳಿಗಾಗಿ ಇವುಗಳನ್ನು “ವಿರಳ” ಭೂ ಧಾತುಗಳು ಎಂದು ಪರಿಗಣಿಸಲಾಗುತ್ತದೆ:

    • ಇವು ಅತ್ಯಂತ ಕಡಿಮೆ ಸಾಂದ್ರತೆಯಲ್ಲಿ ಸಿಗುತ್ತವೆ.
    • ಇವುಗಳ ಹೊರತೆಗೆಯುವಿಕೆ ಮತ್ತು ಸಂಸ್ಕರಣೆಯು ಅತ್ಯಂತ ಕಠಿಣವಾಗಿದ್ದು, ಹೆಚ್ಚಿನ ಬಂಡವಾಳ ಮತ್ತು ಸುಧಾರಿತ ತಂತ್ರಜ್ಞಾನದ ಅಗತ್ಯವಿರುತ್ತದೆ.

    ವಿರಳ ಭೂ ಧಾತು (REE)ಗಳ ವರ್ಗೀಕರಣ:

    1. ಹಗುರ REEಗಳು: ಲ್ಯಾಂಥನಮ್, ಸಿರಿಯಮ್, ನಿಯೋಡೈಮಿಯಮ್, ಪ್ರಾಸಿಯೊಡೈಮಿಯಮ್, ಸಮೇರಿಯಮ್ ಇತ್ಯಾದಿ.
    2. ಭಾರೀ REEಗಳು: ಡಿಸ್ಪ್ರೋಸಿಯಮ್, ಟೆರ್ಬಿಯಮ್, ಯಟ್ರಿಯo ಇತ್ಯಾದಿ.

    ರಾಟ್ಲೆ ಜಲವಿದ್ಯುತ್ ಯೋಜನೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ 850 ಮೆಗಾವ್ಯಾಟ್ ಸಾಮರ್ಥ್ಯದ ರಾಟ್ಲೆ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಕಾರ್ಮಿಕರು ಉಗ್ರಗಾಮಿ ಸಂಪರ್ಕ ಅಥವಾ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೇಘಾ ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿಯಮಿತ (MEIL) ಕಂಪನಿಗೆ ಮಾಹಿತಿ ನೀಡಿದ್ದಾರೆ.

    ರಾಟ್ಲೆ ಜಲವಿದ್ಯುತ್ ಯೋಜನೆ (850 MW) ಯ ಬಗ್ಗೆ:

    • ಸ್ಥಳ:- ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕಿಶ್ತ್ವಾರ್ ಜಿಲ್ಲೆಯ ದ್ರಬ್ಶಾಲಾ ಬಳಿ ಚೆನಾಬ್ ನದಿಯ ಮೇಲೆ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ.
    • ವಿಧ ಮತ್ತು ಸಾಮರ್ಥ್ಯ:- ಇದು ‘ರನ್-ಆಫ್-ದಿ-ರಿವರ್’ (ನದಿಯ ನೈಸರ್ಗಿಕ ಹರಿವು) ಮಾದರಿಯ ಯೋಜನೆಯಾಗಿದ್ದು, ಒಟ್ಟು 850 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    • ತಾಂತ್ರಿಕ ವಿವರಗಳು:- ಈ ಯೋಜನೆಯು 133 ಮೀಟರ್ ಎತ್ತರದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು (ಕಾಂಕ್ರೀಟ್ ಗ್ರಾವಿಟಿ ಡ್ಯಾಮ್) ಮತ್ತು ಸಂಬಂಧಿತ ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಒಳಗೊಂಡಿದೆ.

    ರಿಸ್ಪಾಂಡ್ (RESPOND) ಬಾಸ್ಕೆಟ್, 2025

    ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ)

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ‘ರಿಸ್ಪಾಂಡ್ ಬಾಸ್ಕೆಟ್, 2025’ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

    ರಿಸ್ಪಾಂಡ್ ಬಾಸ್ಕೆಟ್, 2025 ರ ಬಗ್ಗೆ:

    • ಇದು ‘ಇಸ್ರೋ’ದ ಮುಂಬರುವ ಕಾರ್ಯಾಚರಣೆಗಳು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿವಿಧ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಇತರ ಮಾನ್ಯತೆ ಪಡೆದ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಂದ ಸಂಶೋಧನಾ ಪ್ರಸ್ತಾವನೆಗಳನ್ನು ಸಲ್ಲಿಸಲು ಆಹ್ವಾನಿಸುತ್ತದೆ.
    • ಇದು ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ-4, ಗಗನಯಾನ ಮಿಷನ್, ಶುಕ್ರ ಕಕ್ಷೆಗಾಮಿ ಮತ್ತು ಮಾನವ ಚಂದ್ರನ ಮೇಲೆ ಇಳಿಯುವಿಕೆ ಸೇರಿದಂತೆ ‘ಇಸ್ರೊ’ದ ಮುಂಬರುವ ಯೋಜನೆಗಳನ್ನು ಬೆಂಬಲಿಸುತ್ತದೆ.