ಇರಾನಿನ ಕುರ್ಡ್ ಸಮುದಾಯ | ರೈಸಿನಾ ಡೈಲಾಗ್ (ಸಂವಾದ), 2026 | ಗುರುತ್ವಾಕರ್ಷಣ ಬಾಂಬ್ (Gravity Bomb) | ಜೈವಿಕ ವೈವಿಧ್ಯತಾ ಸಮಾವೇಶ: ಭಾರತದ 7ನೇ ವರದಿ | ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಕರ್ನಾಟಕ ಮತ್ತು ಆಂಧ್ರಪ್ರದೇಶ | ‘ಮೂನ್‌ಶಾಟ್’ ಮೆಲುಕು ಯೋಜನೆ :ಐಐಎಸ್‌ಸಿ (IISc)

ಇರಾನಿನ ಕುರ್ಡ್ ಸಮುದಾಯ

ಅಂತರರಾಷ್ಟ್ರೀಯ ವಿದ್ಯಮಾನಗಳು

ಇದೀಗ ಸುದ್ದಿಯಲ್ಲಿದೆ:

  • ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧ ದಾಳಿ ನಡೆಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನಿನ ಕುರ್ಡ್ ಜನಾಂಗೀಯ ಪಡೆಗಳನ್ನು ಪ್ರೋತ್ಸಾಹಿಸಿದ್ದಾರೆ.

ಕುರ್ಡ್ ಜನಾಂಗೀಯ ಸಮುದಾಯದ ಬಗ್ಗೆ:

  • ಕುರ್ಡ್ ಜನಾಂಗವು ಮಧ್ಯಪ್ರಾಚ್ಯದ ದೇಶಗಳಲ್ಲಿ ವಾಸಿಸುತ್ತಿರುವ ಒಂದು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಇವರಿಗೆ ತಮ್ಮದೇ ಆದ ಸ್ವತಂತ್ರ ರಾಷ್ಟ್ರವಿಲ್ಲ.
  • ವಿಶ್ವದಾದ್ಯಂತ ಇವರ ಜನಸಂಖ್ಯೆಯು 25 ರಿಂದ 45 ದಶ ಲಕ್ಷದ ನಡುವೆ ಇದೆ. ಇವರಲ್ಲಿ ಬಹುಪಾಲು ಜನರು ಪಶ್ಚಿಮ ಇರಾನ್, ಪೂರ್ವ ಟರ್ಕಿ, ಉತ್ತರ ಇರಾಕ್, ಸಿರಿಯಾ ಮತ್ತು ಅರ್ಮೇನಿಯಾದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
  • ಇವರು ವಿವಿಧ ಕುರ್ಡ್ ಜನಾಂಗೀಯ ಉಪಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳಿಗೆ ತುರ್ಕಿ ಅಥವಾ ಅರೇಬ್ಬೀ ಭಾಷೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಹಾಗೂ ಈ ಸಮುದಾಯದ ಬಹುಪಾಲು ಜನರು ಸುನ್ನಿ ಮುಸ್ಲಿಮರಾಗಿದ್ದಾರೆ.
  • ಟರ್ಕಿಯು ಸರಿಸುಮಾರು 15 ರಿಂದ 20 ದಶ ಲಕ್ಷ ಕುರ್ಡ್‌ ಜನರನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಕುರ್ಡ್ ಜನಸಂಖ್ಯೆ ಇರುವ ದೇಶವಾಗಿದೆ. ಇರಾನ್ ದೇಶದಲ್ಲಿ 8 ರಿಂದ 12 ದಶ ಲಕ್ಷ ಕುರ್ಡ್ ಜನರಿದ್ದಾರೆ.

ಕುರ್ಡ್ ಸಮುದಾಯದ ಬಗ್ಗೆ ಕಳವಳ:

  • ಮೊದಲನೇ ಮಹಾಯುದ್ಧದ (WWI) ನಂತರ ಇವರಿಗೆ ಪ್ರತ್ಯೇಕ ರಾಷ್ಟ್ರವನ್ನು ಒದಗಿಸುವ ಭರವಸೆ ನೀಡಲಾಗಿತ್ತು, ಆದರೆ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ.
  • ಈ ಸಮುದಾಯವು ಅನೇಕ ಬಂಡಾಯಗಳನ್ನು ಎದುರಿಸಿದೆ ಮತ್ತು ವಿವಿಧ ಸರ್ಕಾರಗಳು ಇವರ ಭಾಷೆ ಹಾಗೂ ಸಂಸ್ಕೃತಿಯನ್ನು ಹತ್ತಿಕ್ಕುವ ದಮನಕಾರಿ ನೀತಿಯನ್ನು ಅನುಸರಿಸಿವೆ.

ಕುರ್ಡಿಸ್ತಾನ್ ಪ್ರಾದೇಶಿಕ ಸರ್ಕಾರ (KRG):

  • ಹಲವಾರು ವರ್ಷಗಳ ಕಾಲದ ಸಂಘರ್ಷ ಮತ್ತು 1991 ರ ಕೊಲ್ಲಿ ಯುದ್ಧದ ನಂತರ, ಕುರ್ಡ್‌ ಜನರು ಇರಾಕ್‌ನಲ್ಲಿ ‘ಕುರ್ಡಿಸ್ತಾನ್ ಪ್ರಾದೇಶಿಕ ಸರ್ಕಾರ’ವನ್ನು (KRG) ಸ್ಥಾಪಿಸಿದರು. ಇದು ಪ್ರಸ್ತುತ ಇರಾಕ್‌ನ ಸಂವಿಧಾನದಿಂದ ಮಾನ್ಯತೆ ಪಡೆದ ಒಂದು ಸ್ವಾಯತ್ತ ಪ್ರದೇಶವಾಗಿದೆ.

ರೈಸಿನಾ ಡೈಲಾಗ್ (ಸಂವಾದ), 2026

ಅಂತರರಾಷ್ಟ್ರೀಯ ವಿದ್ಯಮಾನಗಳು

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ನವದೆಹಲಿಯಲ್ಲಿ ಜರುಗಿದ ‘ರೈಸಿನಾ ಡೈಲಾಗ್ 2026’ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
  • 2026 ರ ಆವೃತ್ತಿಯ ಘೋಷವಾಕ್ಯ:- “ಸಂಸ್ಕಾರ: ಪ್ರತಿಪಾದನೆ, ಸಮನ್ವಯ, ಪ್ರಗತಿ” ಎಂಬುದಾಗಿತ್ತು.

‘ರೈಸಿನಾ ಡೈಲಾಗ್’ (ಸಂವಾದ)ನ ಬಗ್ಗೆ:

  • ರೈಸಿನಾ ಡೈಲಾಗ್ ಎಂಬುದು ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಅರ್ಥಶಾಸ್ತ್ರದ ಕುರಿತಾದ ಭಾರತದ ಪ್ರಮುಖ ಜಾಗತಿಕ ಸಮ್ಮೇಳನವಾಗಿದೆ. ಜಾಗತಿಕ ಸಮುದಾಯವು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಇದು ಬದ್ಧವಾಗಿದೆ.
  • ಜಾಗತಿಕ ನಾಯಕರು, ನೀತಿ ನಿರೂಪಕರು, ರಾಜತಾಂತ್ರಿಕರು, ವಿದ್ವಾಂಸರು ಮತ್ತು ಕಾರ್ಯತಂತ್ರದ ತಜ್ಞರನ್ನು ಒಗ್ಗೂಡಿಸಿ ಪ್ರಮುಖ ಅಂತರರಾಷ್ಟ್ರೀಯ ಸವಾಲುಗಳ ಬಗ್ಗೆ ಚರ್ಚಿಸಲು ಇದು ವೇದಿಕೆ ಕಲ್ಪಿಸುತ್ತದೆ.
  • ಈ ಸಮ್ಮೇಳನದ ಮೊದಲನೇ ಆವೃತ್ತಿಯನ್ನು 2016 ರಲ್ಲಿ ಆಯೋಜಿಸಲಾಗಿತ್ತು.
  • ನವದೆಹಲಿ ಮೂಲದ ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ (ORF) ಸಂಸ್ಥೆಯು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸುತ್ತದೆ.

ಗುರುತ್ವಾಕರ್ಷಣ ಬಾಂಬ್ (Gravity Bomb)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:

  • ಇರಾನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪ್ರಮುಖ ಯುದ್ಧತಂತ್ರದ ಬದಲಾವಣೆಯನ್ನು ಮಾಡಲಾಗಿದ್ದು, ಅಮೆರಿಕವು ‘ಗುರುತ್ವಾಕರ್ಷಣಾ ಬಾಂಬ್’ಗಳ ಬಳಕೆಗೆ ಮುಂದಾಗಲಿದೆ ಎಂದು ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಘೋಷಿಸಿದ್ದಾರೆ.

ಗುರುತ್ವಾಕರ್ಷಣ ಬಾಂಬ್ ಎಂದರೇನು?

  • ಗುರುತ್ವಾಕರ್ಷಣ ಬಾಂಬ್ (ಅಥವಾ ಮುಕ್ತ-ಪತನ ಬಾಂಬ್) ಎನ್ನುವುದು ವಿಮಾನದಿಂದ ಬೀಳಿಸುವ, ಇಂಧನ ಅಥವಾ ಎಂಜಿನ್ ರಹಿತವಾದ ಯುದ್ಧ ಸಾಮಗ್ರಿಯಾಗಿದೆ.
  • ‘ಟೊಮಾಹಾಕ್’ ನಂತಹ ಕ್ರೂಸ್ ಕ್ಷಿಪಣಿಗಳಿಗೆ ಹೋಲಿಸಿದರೆ, ಈ ಗುರುತ್ವಾಕರ್ಷಣಾ ಬಾಂಬ್‌ಗಳು ಯಾವುದೇ ಎಂಜಿನ್ ಅಥವಾ ನೋದನ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಬದಲಾಗಿ, ಇವುಗಳನ್ನು ಬೀಳಿಸುವ ವಿಮಾನದ ವೇಗ ಮತ್ತು ಎತ್ತರವನ್ನು ಆಧರಿಸಿ, ಕೇವಲ ಭೂಮಿಯ ಗುರುತ್ವಾಕರ್ಷಣಾ ಬಲದಿಂದಲೇ ಇವು ಗುರಿಯತ್ತ ಚಲಿಸುತ್ತವೆ.
  • ‘ಜಾಯಿಂಟ್ ಡೈರೆಕ್ಟ್ ಅಟ್ಯಾಕ್ ಮ್ಯುನಿಷನ್’ (JDAM) ಕಿಟ್‌ಗಳ ಅಳವಡಿಕೆ:- ಅನೇಕ ಗುರುತ್ವಾಕರ್ಷಣಾ ಬಾಂಬ್‌ಗಳಿಗೆ ಈ ಕಿಟ್‌ಗಳನ್ನು ಅಳವಡಿಸಲಾಗುತ್ತದೆ. ಇವು ಜಿಪಿಎಸ್ (GPS) ಮತ್ತು ನಿಯಂತ್ರಿಸಬಹುದಾದ ರೆಕ್ಕೆಗಳನ್ನು ಬಳಸಿಕೊಂಡು, ನಿಖರ-ಮಾರ್ಗದರ್ಶಿ ಯುದ್ಧಸಾಮಗ್ರಿಗಳಾಗಿ ಮಾರ್ಪಡುತ್ತವೆ.
  • ಪ್ರಮುಖ ಲಕ್ಷಣ:- ಈ ಬಾಂಬ್‌ಗಳು ತುಲನಾತ್ಮಕವಾಗಿ ಅಗ್ಗವಾಗಿವೆ. ಆದರೆ, ಗುರಿಯ ಅತ್ಯಂತ ಸಮೀಪದಲ್ಲಿ ವಿಮಾನವು ಹಾರಾಟ ನಡೆಸಬೇಕಾಗಿರುವುದರಿಂದ, ವಾಯುಪ್ರದೇಶದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದಾಗ ಮಾತ್ರ ಇವು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

ಜೈವಿಕ ವೈವಿಧ್ಯತಾ ಸಮಾವೇಶ: ಭಾರತದ 7ನೇ ವರದಿ

ಪರಿಸರ

ಇದೀಗ ಸುದ್ದಿಯಲ್ಲಿದೆ:

  • 2030 ರ 23 ರಾಷ್ಟ್ರೀಯ ಜೈವಿಕ ವೈವಿಧ್ಯತಾ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಗತಿಯನ್ನು ಮೌಲ್ಯಮಾಪನ ಮಾಡಿ, ಭಾರತವು ‘ಜೈವಿಕ ವೈವಿಧ್ಯತಾ ಸಮಾವೇಶ’ಕ್ಕೆ (CBD) ತನ್ನ 7 ನೇ ವರದಿಯನ್ನು ಸಲ್ಲಿಸಿದೆ.
  • ಈ ವರದಿಯು ‘ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತಾ ಚೌಕಟ್ಟಿಗೆ’ (KMGBF) ಅನುಗುಣವಾಗಿ 23 ‘ರಾಷ್ಟ್ರೀಯ ಜೈವಿಕ ವೈವಿಧ್ಯತಾ ಗುರಿ’ಗಳ (NBTs) ಅಡಿಯಲ್ಲಿ ಭಾರತದ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತದೆ.

ಜೈವಿಕ ವೈವಿಧ್ಯತಾ ಸಮಾವೇಶ (CBD)ದ ಬಗ್ಗೆ:

  • ಉಗಮ:- 1992 ರಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ (ರಿಯೋ ಭೂ ಶೃಂಗಸಭೆ) ಈ ಸಮಾವೇಶವನ್ನು ಸಹಿಗಾಗಿ ಮುಕ್ತಗೊಳಿಸಲಾಯಿತು.
  • ಜಾರಿಗೆ:- ಡಿಸೆಂಬರ್ 29, 1993
  • ಮೊದಲ ಅಧಿವೇಶನ:- 1994 ರಲ್ಲಿ ಪಕ್ಷಗಳ ಸಮ್ಮೇಳನ (COP)ದ ಮೊದಲನೇ ಅಧಿವೇಶನವನ್ನು ಬಹಾಮಾಸ್‌ನಲ್ಲಿ ಆಯೋಜಿಸಲಾಗಿತ್ತು.
  • ಕಾರ್ಯಾಲಯ:- ಕೆನಡಾದ ಮಾಂಟ್ರಿಯಲ್‌ನಲ್ಲಿದೆ.
  • 196 ರಾಷ್ಟ್ರಗಳು CBD ಯನ್ನು ಅನುಮೋದಿಸಿವೆ:- ಇದು ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಒಂದಾಗಿದೆ. 
  • ಅಮೆರಿಕವು ಈ ಸಮಾವೇಶವನ್ನು ಅನುಮೋದಿಸದ ವಿಶ್ವಸಂಸ್ಥೆಯ ಏಕೈಕ ಸದಸ್ಯ ರಾಷ್ಟ್ರ ಎಂಬುದು ಗಮನಾರ್ಹ.
  • 3 ಪ್ರಮುಖ ಉದ್ದೇಶಗಳು:- 
  • ಜೈವಿಕ ವೈವಿಧ್ಯತೆಯ ಸಂರಕ್ಷಣೆ. 
  • ಜೈವಿಕ ವೈವಿಧ್ಯತೆಯ ಘಟಕಗಳ ಸುಸ್ಥಿರ ಬಳಕೆ
  • ಅನುವಂಶಿಕ ಸಂಪನ್ಮೂಲಗಳ ಬಳಕೆಯಿಂದ ಉಂಟಾಗುವ ಪ್ರಯೋಜನಗಳ ನ್ಯಾಯಸಮ್ಮತ ಹಾಗೂ ಸಮಾನ ಹಂಚಿಕೆ ಮಾಡುವುದು.
    • ಆಡಳಿತ ಮಂಡಳಿ:- ಪಕ್ಷಗಳ ಸಮ್ಮೇಳನ (COP), ಇದು ಪ್ರತಿ 2 ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ.
  • ಪೂರಕ ಒಪ್ಪಂದಗಳು:-
  1. ‘ಕಾರ್ಟೇಜಿನಾ ಶಿಷ್ಟಾಚಾರ’ (ಜೈವಿಕ ಸುರಕ್ಷತೆ ಕುರಿತ).
  2. ‘ನಗೋಯಾ ಶಿಷ್ಟಾಚಾರ’ (ಲಭ್ಯತೆ ಹಾಗೂ ಪ್ರಯೋಜನ-ಹಂಚಿಕೆ ಕುರಿತ).

ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತಾ ಚೌಕಟ್ಟು (KMGBF):

  • 2022 ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ CBD ಯ ಪಕ್ಷಗಳ ಸಮ್ಮೇಳನ-15 (COP15) ರಲ್ಲಿ ಈ ಚೌಕಟ್ಟು ಅಂತಿಮಗೊಂಡಿತು.
  • ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಉದ್ದೇಶದಿಂದ, 2030 ರ ವೇಳೆಗೆ ಸಾಧಿಸಬೇಕಾದ 23 ಗುರಿಗಳನ್ನು ಮತ್ತು 2050 ರ ವೇಳೆಗೆ ಸಾಧಿಸಬೇಕಾದ 4 ಜಾಗತಿಕ ಗುರಿಗಳನ್ನು ಇದು ಒಳಗೊಂಡಿದೆ.
  • ಈ ಒಪ್ಪಂದವು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಕಡ್ಡಾಯವಲ್ಲ.

ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಕರ್ನಾಟಕ ಮತ್ತು ಆಂಧ್ರಪ್ರದೇಶ

ಆಡಳಿತ

ಇದೀಗ ಸುದ್ದಿಯಲ್ಲಿದೆ:

  • ಕರ್ನಾಟಕ ಸರ್ಕಾರವು ತನ್ನ ಇತ್ತೀಚಿನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವುದಾಗಿ ಘೋಷಿಸಿದೆ. 
  • ಇದೇ ಸಂದರ್ಭದಲ್ಲಿ, ಆಂಧ್ರಪ್ರದೇಶ ಸರ್ಕಾರವು 13 ವರ್ಷದೊಳಗಿನ ಮಕ್ಕಳಿಗೆ ಈ ಸೇವೆಗಳನ್ನು ನಿರ್ಬಂಧಿಸುವ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ.
  • ಪ್ರಮುಖ ಉದ್ದೇಶ:- ಅಪ್ರಾಪ್ತ ವಯಸ್ಕರಿಗೆ ಸಾಮಾಜಿಕ ಜಾಲತಾಣಗಳ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಡಿಜಿಟಲ್ ಗೀಳನ್ನು ಹೋಗಲಾಡಿಸುವುದು ಮತ್ತು ಅವರ ಮಾನಸಿಕ ಆರೋಗ್ಯವನ್ನು ಕಾಪಾಡುವುದು.

ರಾಜ್ಯವಾರು ಉದ್ದೇಶಿತ ನಿರ್ಬಂಧಗಳು:

  • ಕರ್ನಾಟಕ:- 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
  • ಆಂಧ್ರಪ್ರದೇಶ:- 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

ಪ್ರಮುಖ ಉದ್ದೇಶಗಳು ಮತ್ತು ಹಿನ್ನೆಲೆ:

  • ಆರೋಗ್ಯ ಮತ್ತು ಸುರಕ್ಷತೆ:- ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಚಟ, ಸೈಬರ್ ಕಿರುಕುಳ (ಸೈಬರ್‌ಬುಲ್ಲಿಂಗ್) ಹಾಗೂ ಶೈಕ್ಷಣಿಕ ಸಾಧನೆಯಲ್ಲಿನ ಕುಸಿತವು ಸರ್ಕಾರಗಳನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿವೆ.
  • ಜಾಗತಿಕ ನಿದರ್ಶನಗಳು:- 2025 ರ ಅಂತ್ಯದ ವೇಳೆಗೆ 16 ವರ್ಷದೊಳಗಿನ ಮಕ್ಕಳಿಗಾಗಿ ಆಸ್ಟ್ರೇಲಿಯಾ ದೇಶವು ಜಾರಿಗೆ ತಂದ ವಿಶ್ವದ ಮೊದಲ ರಾಷ್ಟ್ರವ್ಯಾಪಿ ನಿಷೇಧದಂತಹ ಅಂತರರಾಷ್ಟ್ರೀಯ ಪ್ರವೃತ್ತಿಗಳನ್ನು ಈ ಕ್ರಮಗಳು ಅನುಸರಿಸುತ್ತಿವೆ.
  • ಬೆಂಬಲ ಕ್ರಮಗಳು:- ಕರ್ನಾಟಕ ಸರ್ಕಾರವು ಈ ಪ್ರಸ್ತಾವನೆಯ ಜೊತೆಗೆ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನವನ್ನು ಜೋಡಿಸಿದ್ದು, ಶೈಕ್ಷಣಿಕ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರನ್ನು ನಿಯೋಜಿಸಲು ಯೋಜಿಸಿದೆ.

‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ:

  • ಇದು 2026 ರ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ರಾಜ್ಯವ್ಯಾಪಿ ಅಭಿಯಾನವಾಗಿದೆ. 
  • ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳನ್ನು ಕಡಿಮೆ ಮಾಡುವುದು ಮತ್ತು ಓದುವ ಹವ್ಯಾಸವನ್ನು ಹೆಚ್ಚಿಸುವುದು ಇದರ ಆಶಯವಾಗಿದೆ.
  • ಪ್ರಾಥಮಿಕ ಉದ್ದೇಶ:- 16 ವರ್ಷದೊಳಗಿನ ಮಕ್ಕಳ ಅತಿಯಾದ ಪರದೆ ಸಮಯ (ಸ್ಕ್ರೀನ್ ಟೈಮ್) ಕಡಿಮೆ ಮಾಡುವುದು ಮತ್ತು ಭೌತಿಕ ಪುಸ್ತಕಗಳು ಹಾಗೂ ಗ್ರಂಥಾಲಯಗಳ ಬಗ್ಗೆ ಒಲವು ಬೆಳೆಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು.
  • ಗುರಿ:- ಕರ್ನಾಟಕದಾದ್ಯಂತ ಇರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಮಾರು 50 ಲಕ್ಷ ವಿದ್ಯಾರ್ಥಿಗಳನ್ನು ತಲುಪುವುದು.
  • ಅನುಷ್ಠಾನ:- ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ (DSEL) ಹಾಗೂ ‘ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ’ (DSERT) ಈ ಅಭಿಯಾನದ ಮೇಲ್ವಿಚಾರಣೆಯನ್ನು ವಹಿಸಿವೆ.

‘ಮೂನ್‌ಶಾಟ್’ ಮೆಲುಕು ಯೋಜನೆ :ಐಐಎಸ್‌ಸಿ (IISc)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ: 

  • ಭಾರತೀಯ ವಿಜ್ಞಾನ ಸಂಸ್ಥೆಯು (IISc) ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಥವಾ ಮರುಸ್ಥಾಪಿಸಲು, ನ್ಯೂರೋಮಾರ್ಫಿಕ್ ಹಾರ್ಡ್‌ವೇರ್ ಮತ್ತು ಕೃತಕ ಬುದ್ಧಿಮತ್ತೆ (AI) ಅಲ್ಗಾರಿದಮ್‌ಗಳನ್ನು ಸಂಯೋಜಿಸಿ ಮೆದುಳಿನ ಸಹ-ಪ್ರಕ್ರಿಯಕ (ಕೋ-ಪ್ರೊಸೆಸರ್)ಗಳನ್ನು ಅಭಿವೃದ್ಧಿಪಡಿಸುವ ‘ಮೂನ್‌ಶಾಟ್’ ಮೆಲುಕು ಯೋಜನೆಯನ್ನು ಪ್ರಾರಂಭಿಸಿದೆ.

ಮೆದುಳಿನ ಸಹ-ಪ್ರಕ್ರಿಯಕ (ಕೋ-ಪ್ರೊಸೆಸರ್)ಗಳ ಬಗ್ಗೆ:

  • ಮೆದುಳಿನ ಕೋ-ಪ್ರೊಸೆಸರ್‌ಗಳು ಮಾನವನ ಮೆದುಳಿನೊಂದಿಗೆ ನೇರವಾಗಿ ಸಂವಹನ ನಡೆಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸಾಧನಗಳಾಗಿವೆ.
  • ಈ ಸಾಧನಗಳು ನರಕೋಶಗಳ ಸಂಕೇತಗಳನ್ನು ಬಿಡಿಸಿ ಅರ್ಥೈಸುತ್ತವೆ, ಕೃತಕ ಬುದ್ಧಿಮತ್ತೆ (AI) ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಅವುಗಳನ್ನು ಸಂಸ್ಕರಿಸುತ್ತವೆ ಮತ್ತು ನರಗಳ ಉದ್ದೀಪನ ಅಥವಾ ನ್ಯೂರೋಫೀಡ್‌ಬ್ಯಾಕ್ ಮೂಲಕ ಮೆದುಳಿಗೆ ಮರಳಿ ಸಂಕೇತಗಳನ್ನು ರವಾನಿಸುತ್ತವೆ.

ವಸ್ತುಗಳನ್ನು ತಲುಪುವ ಮತ್ತು ಗ್ರಹಿಸುವಂತಹ ಸಂವೇದನಾ ಹಾಗೂ ಚಲನಾ ಸಾಮರ್ಥ್ಯಗಳನ್ನು ಕಳೆದುಕೊಂಡಿರುವ ಪಾರ್ಶ್ವವಾಯು ಪೀಡಿತರಿಗೆ ಅರಿವಿನ ಮತ್ತು ಚಲನಾ ಸಾಮರ್ಥ್ಯದ ಮರುಸ್ಥಾಪನೆಗೆ ಈ ಸಾಧನಗಳು ಅತ್ಯಂತ ಪ್ರಮುಖವಾಗಿ ನೆರವಾಗುತ್ತವೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts