‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 81 ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳಿಗೆ (MHUs) ಚಾಲನೆ ನೀಡಿದ್ದಾರೆ.
‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ:
- ಗುರಿ:- ಕರ್ನಾಟಕದ ದೂರದ, ತಲುಪಲು ಅಸಾಧ್ಯವಾದ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ.
- ಇಲ್ಲಿಯವರೆಗೆ ಔಪಚಾರಿಕ ಆರೋಗ್ಯ ವ್ಯವಸ್ಥೆಯ ಹೊರಗೆ ಉಳಿದಿದ್ದ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳು ತಲುಪುವಂತೆ ಮಾಡಲು ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು.
- ವ್ಯಾಪ್ತಿ:- “ಅತಿದೂರದ ಗ್ರಾಮಗಳಿಗೂ ಆರೋಗ್ಯ ಸೇವೆ” ಎಂಬ ಧ್ಯೇಯವಾಕ್ಯದಡಿ ಪ್ರಾರಂಭಿಸಲಾದ ಈ ಸಂಚಾರಿ ಘಟಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 32 ಮೀಸಲು ಕ್ಷೇತ್ರಗಳು ಸೇರಿದಂತೆ, ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲಿವೆ.
- ಅನುಷ್ಠಾನ ಮತ್ತು ನಿಧಿ:– ಒಟ್ಟು 81 ಘಟಕಗಳ ಪೈಕಿ 49 ಘಟಕಗಳನ್ನು “ರಾಷ್ಟ್ರೀಯ ಆರೋಗ್ಯ ಅಭಿಯಾನ” (NHM)ದ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಇನ್ನುಳಿದ 32 ಘಟಕಗಳಿಗೆ ರಾಜ್ಯ ಸರ್ಕಾರದ “ಪರಿಶಿಷ್ಟ ಜಾತಿಗಳ ಉಪ-ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ- ಯೋಜನೆ” (SCSP/TSP) ಹಂಚಿಕೆಯಡಿ ಹಣಕಾಸು ಒದಗಿಸಲಾಗುತ್ತಿದೆ.
- ಸಿಬ್ಬಂದಿ:- ಪ್ರತಿಯೊಂದು ಸಂಚಾರಿ ಆರೋಗ್ಯ ಘಟಕವು ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ದಾದಿ (ನರ್ಸ್) ಮತ್ತು ಒಬ್ಬರು ಪ್ರಯೋಗಾಲಯ ತಂತ್ರಜ್ಞರನ್ನು ಒಳಗೊಂಡಿರುತ್ತದೆ.
- ಒದಗಿಸಲಾಗುವ ಸೇವೆಗಳು:– ಹೊರರೋಗಿ ಸಮಾಲೋಚನೆ (OPD), ತ್ವರಿತ ರೋಗನಿರ್ಣಯ ಕಿಟ್ಗಳ ಮೂಲಕ ಮೂಲಭೂತ ಪರೀಕ್ಷೆಗಳು, ಉಚಿತ ಔಷಧಿಗಳು, ಉಲ್ಲೇಖಿತ ಸೇವೆಗಳು ಮತ್ತು ಸಮುದಾಯ ಆರೋಗ್ಯ ಮೇಲ್ವಿಚಾರಣೆ ಈ ಸೇವೆಯಲ್ಲಿ ಒಳಗೊಂಡಿವೆ.
- ವಿಕೇಂದ್ರೀಕೃತ ಮೇಲ್ವಿಚಾರಣೆ:– ಈ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಮೇಲ್ವಿಚಾರಣೆಯೊಂದಿಗೆ ಜಾರಿಗೆ ತರಲಾಗುತ್ತಿದ್ದು, ಇದು ಸ್ಥಳೀಯ ಅಗತ್ಯ ಮತ್ತು ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡುತ್ತದೆ.
- ತುರ್ತು ಬಳಕೆ:– ಈ ಘಟಕಗಳನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮತ್ತು ವಿಪತ್ತು ನಿರ್ವಹಣೆ ವೇಳೆಯೂ ನಿಯೋಜಿಸಲಾಗುವುದು.
- ಹಂಚಿಕೆ:– ಒಟ್ಟು ಘಟಕಗಳ ಪೈಕಿ 41 ವಾಹನಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ.



ನಿಮ್ಮದೊಂದು ಉತ್ತರ