ಅಗತ್ಯ ಸರಕುಗಳ ಕಾಯ್ದೆ ಜಾರಿ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯ ನಂತರ ಉಂಟಾದ ತೈಲ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
- ತೈಲ ಸಂಸ್ಕರಣೆಯ ಉಪ-ಉತ್ಪನ್ನಗಳಾದ ಪ್ರೊಪೇನ್ ಮತ್ತು ಬ್ಯುಟೇನ್ ಬಳಸಿ ಎಲ್ಪಿಜಿ (LPG) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ.
- ಅಷ್ಟೇ ಅಲ್ಲದೆ, ಇದನ್ನು ಕೇವಲ ದೇಶೀಯ ಗ್ರಾಹಕರಿಗೆ ಮಾತ್ರ ಪ್ರತ್ಯೇಕವಾಗಿ ಪೂರೈಸುವಂತೆ ಮತ್ತು ಈ ಸ್ಟ್ರೀಮ್ಗಳನ್ನು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಗತ್ಯ ಸರಕುಗಳ ಕಾಯ್ದೆ, 1955 ರ ಬಗ್ಗೆ:
- ಹೆಚ್ಚುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲು, ಕಾಳಸಂತೆಯಲ್ಲಿನ ದಾಸ್ತಾನು ತಡೆಗಟ್ಟಲು ಮತ್ತು ದೇಶದಲ್ಲಿ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ವರ್ಷಗಳಿಂದ ಈ ಕಾಯ್ದೆಯನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ.
- ಅಗತ್ಯ ಸರಕುಗಳ ಪಟ್ಟಿಯಲ್ಲಿ ಈ ಕೆಳಗಿನವು ಸೇರಿವೆ:- ಔಷಧಗಳು, ರಸಗೊಬ್ಬರಗಳು, ಆಹಾರ ಪದಾರ್ಥಗಳು (ಖಾದ್ಯ ತೈಲಗಳು ಸೇರಿದಂತೆ), ಹ್ಯಾಂಕ್ ನೂಲು, ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ಸೆಣಬು ಮತ್ತು ಸೆಣಬಿನ ಜವಳಿ, ಹಾಗೂ ಹಣ್ಣುಗಳು, ತರಕಾರಿಗಳು ಮತ್ತು ದನಗಳ ಮೇವಿನ ವಿವಿಧ ರೀತಿಯ ಬೀಜಗಳು.
ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020:
- ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಮುಖ ಆಹಾರ ಪದಾರ್ಥಗಳನ್ನು ನಿಯಂತ್ರಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸಿದೆ.
- ಕೃಷಿ ಉತ್ಪನ್ನಗಳ ಬೆಲೆಗಳು ತೀವ್ರವಾಗಿ ಏರಿಕೆಯಾದಾಗ ಮಾತ್ರ ಕೃಷಿ ಉತ್ಪನ್ನಗಳ ಮೇಲಿನ ದಾಸ್ತಾನು ಮಿತಿಗೆ ಈ ತಿದ್ದುಪಡಿಯು ಅವಕಾಶ ಕಲ್ಪಿಸಿದೆ. ಅಂದರೆ, ತೋಟಗಾರಿಕಾ ಸರಕುಗಳ ಬೆಲೆ 100% ಮತ್ತು ಬೇಗ ಹಾಳಾಗದ ಆಹಾರ ಪದಾರ್ಥಗಳ ಬೆಲೆ 50% ಏರಿಕೆಯಾಗಿದ್ದಲ್ಲಿ ಮಾತ್ರ ದಾಸ್ತಾನು ಮಿತಿಯನ್ನು ಹೇರಲು ಅವಕಾಶವಿದೆ.
ಭಾರತದ ಮೊದಲ ‘ನಿಷ್ಕ್ರಿಯ ದಯಾಮರಣ’ ಪ್ರಕರಣ
ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಹರೀಶ ರಾಣಾ ಎಂಬ 32 ವರ್ಷದ ವ್ಯಕ್ತಿಗೆ ನೀಡಲಾಗುತ್ತಿದ್ದ ‘ವೈದ್ಯಕೀಯ ನೆರವಿನ ಪೋಷಣೆ ಮತ್ತು ಜಲಪೂರೈಕೆ’ಯನ್ನು (CANH) ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಅನುಮತಿ ನೀಡಿದೆ.
- ಈ ತೀರ್ಪಿನ ಮೂಲಕ ದೇಶದಲ್ಲೇ ಮೊದಲ ಬಾರಿಗೆ ‘ನಿಷ್ಕ್ರಿಯ ದಯಾಮರಣ’ದ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸಲಾಗಿದೆ.
- ಗಮನಿಸಿ:- ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನವನ್ನು ಜಾರಿಗೊಳಿಸಿದ ರಾಜ್ಯಗಳ ಪೈಕಿ, ಕೇರಳದ ನಂತರ ಕರ್ನಾಟಕವು ಎರಡನೇ ರಾಜ್ಯವಾಗಿ ಹೊರಹೊಮ್ಮಿದೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪು:
- ‘ಕಾಮನ್ ಕಾಸ್ v/s ಭಾರತ ಒಕ್ಕೂಟ’ (2018) ಪ್ರಕರಣ:- ಈ ಐತಿಹಾಸಿಕ ಪ್ರಕರಣದಲ್ಲಿ, ಸಂವಿಧಾನದ 21ನೇ ವಿಧಿಯಡಿ ‘ಘನತೆಯಿಂದ ಮರಣ ಹೊಂದುವ ಹಕ್ಕು’ ಕೂಡ ಒಂದು ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಮಾನ್ಯ ಮಾಡಿದೆ. ಅಲ್ಲದೆ, ಷರತ್ತುಬದ್ಧವಾಗಿ ‘ನಿಷ್ಕ್ರಿಯ ದಯಾಮರಣ’ಕ್ಕೆ ಕಾನೂನಿನ ಮಾನ್ಯತೆಯನ್ನು ಒದಗಿಸಿದೆ.
- ದಯಾಮರಣದ ವ್ಯಾಖ್ಯಾನ:- ತೀವ್ರವಾದ ನೋವು, ಗುಣಪಡಿಸಲಾಗದ ಕಾಯಿಲೆ ಅಥವಾ ಅಸ್ವಸ್ಥತೆಯಿಂದ ನರಳುತ್ತಿರುವ ವ್ಯಕ್ತಿಯನ್ನು ಆ ಯಾತನೆಯಿಂದ ಮುಕ್ತಗೊಳಿಸುವ ಏಕೈಕ ಉದ್ದೇಶದಿಂದ, ಆತನ ಜೀವವನ್ನು ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸುವ ಪ್ರಕ್ರಿಯೆಯನ್ನು ‘ದಯಾಮರಣ’ ಎಂದು ಕರೆಯಲಾಗುತ್ತದೆ.
ನಿಷ್ಕ್ರಿಯ ದಯಾಮರಣದ v/s ಸಕ್ರಿಯ ದಯಾಮರಣದ:
- ನಿಷ್ಕ್ರಿಯ ದಯಾಮರಣ (Passive Euthanasia):- ಗುಣಮುಖರಾಗುವ ಯಾವುದೇ ಭರವಸೆ ಇಲ್ಲದ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುವ ಹಾಗೂ ದೀರ್ಘಕಾಲಿಕ ಯಾತನೆ ಅನುಭವಿಸುತ್ತಿರುವ ಮಾರಣಾಂತಿಕ ಕಾಯಿಲೆಯ ರೋಗಿಗಳಿಗೆ, ನೀಡಲಾಗುತ್ತಿರುವ ‘ಜೀವ ರಕ್ಷಕ ಚಿಕಿತ್ಸೆ’ಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದು ಅಥವಾ ಹಿಂಪಡೆಯುವುದನ್ನು ‘ನಿಷ್ಕ್ರಿಯ ದಯಾಮರಣ’ ಎನ್ನಲಾಗುತ್ತದೆ.
- ಸಕ್ರಿಯ ದಯಾಮರಣ (Active Euthanasia):- ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಸ್ವಯಂಪ್ರೇರಿತ ಕೋರಿಕೆಯ ಮೇರೆಗೆ, ಬಾಹ್ಯ ವೈದ್ಯಕೀಯ ಮಧ್ಯಪ್ರವೇಶದ ಮೂಲಕ (ಉದಾಹರಣೆಗೆ: ಪ್ರಾಣಾಂತಿಕ ಚುಚ್ಚುಮದ್ದು ನೀಡುವುದು) ಉದ್ದೇಶಪೂರ್ವಕವಾಗಿ ಅವರ ಜೀವ ತೆಗೆಯುವ ಪ್ರಕ್ರಿಯೆಯನ್ನು ‘ಸಕ್ರಿಯ ದಯಾಮರಣ’ ಎಂದು ಕರೆಯಲಾಗುತ್ತದೆ.
- ಭಾರತದಲ್ಲಿ ಪ್ರಸ್ತುತ ಈ ವಿಧಾನವು ಸಂಪೂರ್ಣ ಕಾನೂನುಬಾಹಿರವಾಗಿದೆ.
ಏಕರೂಪ ನಾಗರಿಕ ಸಂಹಿತೆ (UCC)
ರಾಜ್ಯಶಾಸ್ತ್ರ ಹಾಗೂ ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಭಾರತದ ಸರ್ವೋಚ್ಚ ನ್ಯಾಯಾಲಯವು ‘ಏಕರೂಪ ನಾಗರಿಕ ಸಂಹಿತೆ’ಯ (UCC) ಪರವಾಗಿ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
- ವಿವಿಧ ಸಮುದಾಯಗಳಲ್ಲಿ ವಿವಾಹ, ವಿಚ್ಛೇದನ ಮತ್ತು ಆಸ್ತಿ ಹಂಚಿಕೆಯಂತಹ (ಉತ್ತರಾಧಿಕಾರ) ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿಂದ ಉಂಟಾಗುವ ಸಂಕೀರ್ಣತೆಗಳನ್ನು ನಿವಾರಿಸಲು, ‘ಸಾಮಾನ್ಯ ನಾಗರಿಕ ಕಾನೂನು ಚೌಕಟ್ಟು’ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು:
- ಅರ್ಜಿಯ ಹಿನ್ನೆಲೆ:- 1937ರ ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆಯ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ಕಾಯ್ದೆಯು ಆಸ್ತಿ ಹಕ್ಕುಗಳಂತಹ ವಿಷಯಗಳಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯ ಎಸಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
- ಕಾನೂನಿನ ಶೂನ್ಯತೆ ಕುರಿತು ಎಚ್ಚರಿಕೆ:- ಪ್ರಸ್ತುತ ಇರುವ ವೈಯಕ್ತಿಕ ಕಾನೂನಿನ ನಿಬಂಧನೆಗಳನ್ನು ಏಕಾಏಕಿ ರದ್ದುಗೊಳಿಸಿದರೆ, ಆಸ್ತಿ ಹಂಚಿಕೆಯ ನಿಯಮಗಳಿಗೆ ಸಂಬಂಧಿಸಿದಂತೆ ‘ಕಾನೂನಿನ ಶೂನ್ಯತೆ’ ಸೃಷ್ಟಿಯಾಗಬಹುದು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
- ಶಾಸಕಾಂಗದ ಕ್ರಮದ ಅಗತ್ಯತೆ:- ವೈಯಕ್ತಿಕ ಕಾನೂನುಗಳಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ‘ಏಕರೂಪ ನಾಗರಿಕ ಸಂಹಿತೆ’ಯು ಸ್ಪಷ್ಟವಾದ ಮತ್ತು ಹೆಚ್ಚು ಸಮಗ್ರವಾದ ಪರಿಹಾರವನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ಒತ್ತಿಹೇಳಿದೆ. ಅಲ್ಲದೆ, ಇದನ್ನು ಜಾರಿಗೊಳಿಸಲು ಕೇವಲ ನ್ಯಾಯಾಂಗದ ನಿರ್ಧಾರಗಳಷ್ಟೇ ಸಾಲದು, ಬದಲಾಗಿ ‘ಶಾಸಕಾಂಗದ ಕ್ರಮ’ವೂ ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.
ಏಕರೂಪ ನಾಗರಿಕ ಸಂಹಿತೆ (UCC)ಯ ಬಗ್ಗೆ:
- ಭಾರತದ ಸಂವಿಧಾನದ ‘ರಾಜ್ಯ ನೀತಿ ನಿರ್ದೇಶಕ ತತ್ವಗಳ’ (DPSP) 44ನೇ ವಿಧಿಯು, ದೇಶದಾದ್ಯಂತ ಎಲ್ಲಾ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸುತ್ತದೆ.
- ಮುಖ್ಯ ಉದ್ದೇಶ:- ಭಾರತದ ಪ್ರಮುಖ ಧಾರ್ಮಿಕ ಸಮುದಾಯಗಳ ಗ್ರಂಥಗಳು ಮತ್ತು ಸಂಪ್ರದಾಯಗಳನ್ನು ಆಧರಿಸಿದ ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸಿ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುವಂತಹ ‘ಸಾಮಾನ್ಯ ನಿಯಮಗಳನ್ನು’ ರೂಪಿಸುವುದು.
- ಏಕರೂಪ ನಾಗರಿಕ ಸಂಹಿತೆಯಲ್ಲಿ ‘ಏಕರೂಪತೆ’/ಸಮಾನತೆ (Uniformity) ಎಂದರೆ:
- ವಿವಿಧ ಸಮುದಾಯಗಳ ನಡುವಿನ ಕಾನೂನುಗಳಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು.
- ಸಮುದಾಯಗಳಲ್ಲಿ ಪುರುಷರು ಮತ್ತು ಮಹಿಳೆಯರ ಹಕ್ಕುಗಳ ನಡುವೆ ಸಮಾನತೆಯನ್ನು ಖಚಿತಪಡಿಸುವ ಮೂಲಕ ಕಾನೂನುಗಳಲ್ಲಿ ಏಕರೂಪತೆಯನ್ನು ಸಾಧಿಸುವುದು.
ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಗಾಗಿ ನಡೆದಿರುವ ಪ್ರಯತ್ನಗಳು:
- ವಿಶೇಷ ವಿವಾಹ ಕಾಯ್ದೆ, 1954:- ಈ ಕಾಯ್ದೆಯು ಯಾವುದೇ ಧರ್ಮವನ್ನು ಪರಿಗಣಿಸದೆ ಪ್ರತಿಯೊಬ್ಬ ನಾಗರಿಕನಿಗೂ ಸಿವಿಲ್ ವಿವಾಹಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಯಾವುದೇ ಭಾರತೀಯ ಪ್ರಜೆಯು ತನ್ನ ಧಾರ್ಮಿಕ ವೈಯಕ್ತಿಕ ಕಾನೂನುಗಳ ಮಿತಿಯನ್ನು ಮೀರಿ ವಿವಾಹವಾಗಲು ಇದು ಅನುಮತಿ ನೀಡುತ್ತದೆ.
- ಶಾ ಬಾನೊ ಪ್ರಕರಣ, 1985:- ಈ ಐತಿಹಾಸಿಕ ಪ್ರಕರಣದಲ್ಲಿ ಶಾ ಬಾನೊ ಎಂಬುವವರಿಗೆ ಜೀವನಾಂಶದ ಹಕ್ಕನ್ನು ನಿರಾಕರಿಸಲಾಗಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 125 ರ ಅಡಿಯಲ್ಲಿ ಅವರ ಪರವಾಗಿ ತೀರ್ಪು ನೀಡಿತು. ಈ ನಿಬಂಧನೆಯು ಎಲ್ಲಾ ನಾಗರಿಕರಿಗೂ ಸಮಾನವಾಗಿ ಅನ್ವಯವಾಗಲಿದ್ದು, ಪತ್ನಿಯರು, ಮಕ್ಕಳು ಮತ್ತು ಪೋಷಕರ ನಿರ್ವಹಣೆಗೆ ಆದೇಶಿಸುತ್ತದೆ.
- ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಏಕರೂಪ ನಾಗರಿಕ ಸಂಹಿತೆಯನ್ನು ಅಂತಿಮವಾಗಿ ಜಾರಿಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಶಿಫಾರಸು ಮಾಡಿತ್ತು.
- ಇತರ ಪ್ರಮುಖ ತೀರ್ಪುಗಳು:- 1995ರ ‘ಸರಳಾ ಮುದ್ಗಲ್’ ತೀರ್ಪಿನಲ್ಲಿ ಹಾಗೂ 2019ರ ‘ಪಾಲೊ ಕೌಟಿನ್ಹೋ ಮತ್ತು ಮಾರಿಯಾ ಲೂಯಿಜಾ ವ್ಯಾಲೆಂಟಿನಾ ಪಿರೇರಾ’ ಪ್ರಕರಣದಲ್ಲಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಏಕರೂಪ ನಾಗರಿಕ ಸಂಹಿತೆಯ ಪರವಾಗಿರುವ ವಾದಗಳು:
- ಯುವಜನರ ಆಕಾಂಕ್ಷೆಗಳಿಗೆ ಮನ್ನಣೆ:- ಜಗತ್ತು ಡಿಜಿಟಲ್ ಯುಗಕ್ಕೆ ಕಾಲಿಡುತ್ತಿರುವಂತೆ, ಯುವ ಜನತೆಯ ಸಾಮಾಜಿಕ ಮನೋಭಾವ ಮತ್ತು ಆಕಾಂಕ್ಷೆಗಳು ಸಮಾನತೆ, ಮಾನವೀಯತೆ ಮತ್ತು ಆಧುನಿಕತೆಯ ಜಾಗತಿಕ ತತ್ವಗಳಿಂದ ರೂಪಿತಗೊಳ್ಳುತ್ತಿವೆ. ಹೀಗಾಗಿ, ಏಕರೂಪ ನಾಗರಿಕ ಸಂಹಿತೆಯ ಜಾರಿಯು ರಾಷ್ಟ್ರ ನಿರ್ಮಾಣದ ಕಡೆಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ನೆರವಾಗುತ್ತದೆ.
- ರಾಷ್ಟ್ರೀಯ ಭಾವೈಕ್ಯತೆಗೆ ಬೆಂಬಲ:- ಸಂವಿಧಾನವು ವೈಯಕ್ತಿಕ ಕಾನೂನುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಾನೂನುಗಳಲ್ಲಿ ನಾಗರಿಕರಿಗೆ ಸಮಾನತೆಯನ್ನು ಖಾತರಿಪಡಿಸಿದೆ. ಯುಸಿಸಿ ಜಾರಿಯಿಂದ ಪ್ರತಿಯೊಬ್ಬರಿಗೂ ಏಕರೂಪದ ವೈಯಕ್ತಿಕ ಕಾನೂನುಗಳು ಅನ್ವಯವಾಗಲಿವೆ. ಇದು ಧಾರ್ಮಿಕ ಆಧಾರದ ಮೇಲಿನ ತಾರತಮ್ಯವನ್ನು ತಡೆಯುತ್ತದೆ. ಜೊತೆಗೆ, ಧರ್ಮದ ಹೆಸರಿನಲ್ಲಿ ವಿಶೇಷ ವಿನಾಯಿತಿಗಳನ್ನು ನೀಡಿ ರಾಜಕೀಯ ಲಾಭ ಪಡೆಯುವ ಪ್ರವೃತ್ತಿಯನ್ನು ಕೊನೆಗೊಳಿಸುತ್ತದೆ.
- ಪಿತೃಪ್ರಧಾನ ಮನಸ್ಥಿತಿಯ ನಿರ್ಮೂಲನೆ:- ಪ್ರಸ್ತುತ ಇರುವ ಬಹುತೇಕ ಧರ್ಮಗಳ ವೈಯಕ್ತಿಕ ಕಾನೂನುಗಳು ಸಮಾಜದ ಪಿತೃಪ್ರಧಾನ ಕಲ್ಪನೆಗಳನ್ನು ಆಧರಿಸಿವೆ. ಯುಸಿಸಿ ಕ್ರೂಢೀಕರಣ ಮತ್ತು ಅನುಷ್ಠಾನವು ಈ ಪಿತೃಪ್ರಧಾನ ಸಂಪ್ರದಾಯವಾದಿ ವ್ಯವಸ್ಥೆಯನ್ನು ಅಳಿಸಿಹಾಕುತ್ತದೆ. ಇದು ಲಿಂಗ ಸಮಾನತೆಯನ್ನು ಉತ್ತೇಜಿಸುವುದರ ಜೊತೆಗೆ ಪುರುಷರು ಹಾಗೂ ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತದೆ.
- ನ್ಯಾಯಾಂಗ ಪ್ರಕ್ರಿಯೆಗೆ ಅನುಕೂಲಕರ:- ಪ್ರಸ್ತುತ ಹಿಂದೂ ಕೋಡ್, ಶರಿಯಾ ಕಾನೂನು ಸೇರಿದಂತೆ ಅನೇಕ ವೈಯಕ್ತಿಕ ಕಾನೂನುಗಳು ಚಾಲ್ತಿಯಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಕಾನೂನುಗಳ ಉಪಸ್ಥಿತಿಯು ವೈಯಕ್ತಿಕ ವಿಷಯಗಳ ತೀರ್ಮಾನದಲ್ಲಿ ಗೊಂದಲ, ಸಂಕೀರ್ಣತೆ ಮತ್ತು ಅಸಂಗತತೆಗಳಿಗೆ ಕಾರಣವಾಗುತ್ತದೆ. ಯುಸಿಸಿ ಜಾರಿಯಿಂದ ನ್ಯಾಯಾಂಗವು ತ್ವರಿತವಾಗಿ ಮತ್ತು ಸಮರ್ಥವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗುತ್ತದೆ.
ಏಕರೂಪ ನಾಗರಿಕ ಸಂಹಿತೆಯ ವಿರುದ್ಧವಿರುವ ವಾದಗಳು:
- 21ನೇ ಭಾರತದ ಕಾನೂನು ಆಯೋಗದ ವರದಿ:- ವೈಯಕ್ತಿಕ ಅಥವಾ ಕೌಟುಂಬಿಕ ಕಾನೂನುಗಳಲ್ಲಿನ ಘರ್ಷಣೆಗಳನ್ನು ಬಗೆಹರಿಸಲು ಏಕರೂಪ ನಾಗರಿಕ ಸಂಹಿತೆಯು ‘ಅವಶ್ಯಕವೂ ಅಲ್ಲ ಮತ್ತು ಅಪೇಕ್ಷಣೀಯವೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದೆ.
- ಭಿನ್ನತೆಗಳ ಅಸ್ತಿತ್ವವು ಕೇವಲ ತಾರತಮ್ಯವನ್ನು ಸೂಚಿಸುವುದಿಲ್ಲ, ಬದಲಾಗಿ ಅದು ಬಲವಾದ ಪ್ರಜಾಪ್ರಭುತ್ವದ ಸಂಕೇತವಾಗಿದೆ.
- ಹಾಗಾಗಿ, ವೈಯಕ್ತಿಕ ಕಾನೂನುಗಳ ನಡುವಿನ ಭಿನ್ನತೆಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಬದಲು, ತಾರತಮ್ಯ ಮತ್ತು ಅಸಮಾನತೆಯನ್ನು ನಿಭಾಯಿಸಲು ಅಸ್ತಿತ್ವದಲ್ಲಿರುವ ಕೌಟುಂಬಿಕ ಕಾನೂನುಗಳಿಗೇ ತಿದ್ದುಪಡಿಗಳನ್ನು ತರಲು ಆಯೋಗವು ಸಲಹೆ ನೀಡಿದೆ.
- ಭಾರತದ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆ:- ಭಾರತದಲ್ಲಿ ಧರ್ಮಗಳು, ಪಂಥಗಳು, ಜಾತಿಗಳು ಮತ್ತು ರಾಜ್ಯಗಳಾದ್ಯಂತ ಅಪಾರವಾದ ಸಾಂಸ್ಕೃತಿಕ ವೈವಿಧ್ಯತೆಯಿದೆ. ಈ ವೈವಿಧ್ಯತೆಯ ಕಾರಣದಿಂದಾಗಿ, ವಿವಾಹದಂತಹ ಸೂಕ್ಷ್ಮ ವೈಯಕ್ತಿಕ ವಿಷಯಗಳಿಗಾಗಿ ಎಲ್ಲರಿಗೂ ಅನ್ವಯವಾಗುವ ಏಕರೂಪದ ನಿಯಮಗಳನ್ನು ರೂಪಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ.
- ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ:- ಭಾರತೀಯ ಸಂವಿಧಾನದ 25 ರಿಂದ 28ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತವೆ. ಅನೇಕ ಸಮುದಾಯಗಳು, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳು ಯುಸಿಸಿಯನ್ನು ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ (ವಿಧಿ 25) ಒಡ್ಡಿದ ಬೆದರಿಕೆ ಎಂದು ಪರಿಗಣಿಸುತ್ತವೆ. ಇದು ಬಹುಸಂಖ್ಯಾತ ಧಾರ್ಮಿಕ ಸಮುದಾಯಗಳ ನಿಯಮಗಳನ್ನು ತಮ್ಮ ಮೇಲೆ ಹೇರುತ್ತದೆ ಎಂಬುದು ಅವರ ಆತಂಕವಾಗಿದೆ.
- ಬುಡಕಟ್ಟು ಜನಾಂಗದವರ ಸ್ಥಳೀಯ ಹಕ್ಕುಗಳಿಗೆ ಚ್ಯುತಿ:- ಯುಸಿಸಿ ಜಾರಿಯು ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಘನತೆಗೆ ಧಕ್ಕೆ ತರುತ್ತದೆ ಎಂದು ನಾಗಾ ಸಮುದಾಯವು ವಾದಿಸಿದೆ. ಬುಡಕಟ್ಟು ಜನಾಂಗದವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವು ದೇಶದ ಉಳಿದ ಜನರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ, ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗಬಹುದು ಎನ್ನಲಾಗಿದೆ.



ನಿಮ್ಮದೊಂದು ಉತ್ತರ