ಎಂ. ಗೋವಿಂದರಾವ್ ಸಮಿತಿ – ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ
ಇದೀಗ ಸುದ್ದಿಯಲ್ಲಿದೆ:
- ಪ್ರಖ್ಯಾತ ಅರ್ಥಶಾಸ್ತ್ರಜ್ಞ ಎಂ. ಗೋವಿಂದರಾವ್ ನೇತೃತ್ವದ ‘ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ’ಯು 2026 ರ ಜನವರಿ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
- 2002 ರ ಐತಿಹಾಸಿಕ ‘ನಂಜುಂಡಪ್ಪ ಸಮಿತಿ’ ವರದಿಯ ಬಳಿಕ ರಾಜ್ಯದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯು ಬಲವಾಗಿದ್ದರೂ, ಪ್ರಾದೇಶಿಕ ಅಸಮತೋಲನವು ಮತ್ತಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಪ್ರವೃತ್ತಿಯನ್ನು 2026 ರ ಈ ವರದಿಯು ಎತ್ತಿತೋರಿಸಿದೆ.
ಈ ವರದಿಯ ಪ್ರಮುಖ ಅಂಶಗಳು ಮತ್ತು ವರ್ಗೀಕರಣ:
ಸಮಿತಿಯು ರಾಜ್ಯದ ಎಲ್ಲಾ 236 ತಾಲ್ಲೂಕುಗಳನ್ನು ಮೌಲ್ಯಮಾಪನ ಮಾಡಿದ್ದು, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹಿಂದುಳಿದಿರುವಿಕೆ ಕೇಂದ್ರೀಕೃತವಾಗಿದೆ ಎಂಬುದನ್ನು ಕಂಡುಕೊಂಡಿದೆ.
- ಅತ್ಯಂತ ಹಿಂದುಳಿದ (Most Backward) ತಾಲ್ಲೂಕುಗಳು:- 93 ತಾಲ್ಲೂಕುಗಳು (ಮುಖ್ಯವಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿವೆ).
- ಹೆಚ್ಚು ಹಿಂದುಳಿದ (More Backward) ತಾಲ್ಲೂಕುಗಳು:- 36 ತಾಲ್ಲೂಕುಗಳು.
- ಹಿಂದುಳಿದ ತಾಲ್ಲೂಕುಗಳು:- 43 ತಾಲ್ಲೂಕುಗಳು.
- ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು:- 64 ತಾಲ್ಲೂಕುಗಳು.
- ಪ್ರಾದೇಶಿಕ ಕೇಂದ್ರೀಕರಣ:- ರಾಜ್ಯದ ಒಟ್ಟು ಹಿಂದುಳಿದ ತಾಲ್ಲೂಕುಗಳಲ್ಲಿ ಅಂದಾಜು ಶೇ 60 ರಷ್ಟು ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ.
ಈ ವರದಿಯ ಪ್ರಮುಖ ಶಿಫಾರಸುಗಳು:
ಕರ್ನಾಟಕವು ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಿತಿಯು ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ:
- ಮಂಡಳಿಗಳ ರದ್ದತಿ:- ಕಳೆದ ಮೂರು ದಶಕಗಳಲ್ಲಿ ಮೂಲಸೌಕರ್ಯಗಳ ಮೇಲೆ ಯಾವುದೇ ಅರ್ಥಪೂರ್ಣ ಪ್ರಭಾವ ಬೀರುವಲ್ಲಿ ವಿಫಲವಾಗಿವೆ ಎಂದು ಉಲ್ಲೇಖಿಸಿ, ‘ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ’ ಹಾಗೂ ‘ಬಯಲುಸೀಮೆ ಅಭಿವೃದ್ಧಿ ಮಂಡಳಿ’ಯನ್ನು ರದ್ದುಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ.
- ಕೆಕೆಆರ್ಡಿಬಿ (KKRDB) ಪುನರ್ರಚನೆ:- ಕಾರ್ಯಾಚರಣೆಯ ವೈಫಲ್ಯಗಳು ಮತ್ತು ತಾತ್ಕಾಲಿಕ ಯೋಜನೆಗಳ ಕಾರಣದಿಂದಾಗಿ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಯನ್ನು (KKRDB) ಸಂಪೂರ್ಣವಾಗಿ ಪುನರ್ರಚಿಸುವಂತೆ ಸಮಿತಿಯು ಕರೆ ನೀಡಿದೆ.
- ಅನುದಾನ ಮೀಸಲಾತಿ:- 2026-27 ರಿಂದ 2030-31 ರವರೆಗಿನ ಅವಧಿಗೆ ಕೆಕೆಆರ್ಡಿಬಿಗೆ ₹29,009 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಒದಗಿಸುವಂತೆ ಶಿಫಾರಸು ಮಾಡಿದೆ.
- ಶಿಕ್ಷಣ ಸುಧಾರಣೆ:- ಕಲಬುರಗಿ ವಿಭಾಗದಲ್ಲಿನ ತೀವ್ರ ಶಿಕ್ಷಕರ ಕೊರತೆಯನ್ನು ಗಮನಿಸಿರುವ ಸಮಿತಿಯು, ಕಡಿಮೆ ದಾಖಲಾತಿಯಿರುವ (25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು) ಶಾಲೆಗಳನ್ನು ತರ್ಕಬದ್ಧಗೊಳಿಸಿ ವಿಲೀನಗೊಳಿಸುವಂತೆ ಸೂಚಿಸಿದೆ.



ನಿಮ್ಮದೊಂದು ಉತ್ತರ