ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ
ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತ ಮತ್ತು ಜರ್ಮನಿ ದೇಶಗಳು ರಕ್ಷಣೆ, ತಂತ್ರಜ್ಞಾನ, ಆರೋಗ್ಯ, ಇಂಧನ ಮತ್ತು ಮಾನವ ಸಂಪನ್ಮೂಲಗಳಂತಹ ವಲಯಗಳಲ್ಲಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ.
ಭಾರತ ಮತ್ತು ಜರ್ಮನಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:
-
- 1951ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆ:- 2026ಕ್ಕೆ ಈ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಳ್ಳಲಿವೆ.
- 2000ನೇ ಇಸವಿಯಿಂದ ಕಾರ್ಯತಂತ್ರದ ಪಾಲುದಾರಿಕೆ:- 2025ಕ್ಕೆ ಈ ಪಾಲುದಾರಿಕೆಯು 25 ವರ್ಷಗಳನ್ನು ಪೂರೈಸಲಿದೆ.
- ರಕ್ಷಣಾ ಸಹಕಾರ:- ಜರ್ಮನಿಯು ಭಾರತದೊಂದಿಗೆ MILAN, PASSEX ಮತ್ತು EX TARANG SHAKTI-1 ನಂತಹ ಅನೇಕ ಬಹುಪಕ್ಷೀಯ ಸಮರಾಭ್ಯಾಸಗಳಲ್ಲಿ ಭಾಗವಹಿಸಿದೆ.
- ವ್ಯಾಪಾರ ಸಹಕಾರ:- 2024ರಲ್ಲಿ ಜರ್ಮನಿಯು ಭಾರತದ 8ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಐರೋಪ್ಯ ಒಕ್ಕೂಟ (EU)ದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇದೇ ವೇಳೆ, ಭಾರತವು ಜರ್ಮನಿಯ 23ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
- ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ, 2022:- ಜರ್ಮನಿಯು 2030ರ ವೇಳೆಗೆ €10 ಬಿಲಿಯನ್ ನೆರವು ನೀಡುವುದಾಗಿ ಹೇಳಿದೆ.
- ನವೀಕರಿಸಬಹುದಾದ ಇಂಧನ, ಮೆಟ್ರೋ ಯೋಜನೆಗಳು, ಹಸಿರು ಕಾರಿಡಾರ್ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿನ ಸಹಯೋಗವು ಭಾರತದ ಹವಾಮಾನ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಬದ್ಧತೆಗಳನ್ನು ಈಡೇರಿಸಲು ನೇರವಾಗಿ ಸಹಕರಿಸುತ್ತದೆ.
- ಬಹುಪಕ್ಷೀಯ ಸಹಕಾರ:-
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ನೀಡುವುದು.
-
- ಜಿ-20, ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು COP ಹವಾಮಾನ ಮಾತುಕತೆಗಳ ವೇದಿಕೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸುವುದು.
- ಭಾರತೀಯ ವಲಸಿಗರು:- ಜರ್ಮನಿಯಲ್ಲಿ ಸುಮಾರು 2.46 ಲಕ್ಷ (2023ರ ಅಂಕಿಅಂಶಗಳ ಪ್ರಕಾರ) ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಮತ್ತು ಭಾರತೀಯ ಮೂಲದ ಜನರಿದ್ದಾರೆ.
ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ
ಸಾಮಾನ್ಯ ಅಧ್ಯಯನ- 3/ ಪರಿಸರ ಮತ್ತು ಪರಿಸರ ವಿಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, COP29 ಶೃಂಗಸಭೆಯಲ್ಲಿ, ಹವಾಮಾನ ಹಣಕಾಸಿನ ವಿತರಣೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಅಡಿಯಲ್ಲಿ ಇಂಗಾಲದ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ನಿರ್ಧರಿಸಲಾಯಿತು.
- ಇದಕ್ಕೂ ಮುನ್ನ, ಜಂಟಿ ಸಾಲದ ಕಾರ್ಯವಿಧಾನ (JCM)ಕ್ಕೇ ಸಹಿ ಹಾಕುವ ಮೂಲಕ ಭಾರತವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ಪರಿಣಾಮಕಾರಿಯಾಗಿ 6.2ನೇ ವಿಧಿಯ ಅನುಷ್ಠಾನವಾಗಿದ್ದು, ಅಂತರರಾಷ್ಟ್ರೀಯ ಇಂಗಾಲದ ಮಾರುಕಟ್ಟೆ ಸಹಕಾರಕ್ಕೆ ಭಾರತದ ಅಧಿಕೃತ ಪ್ರವೇಶವನ್ನು ಸೂಚಿಸುತ್ತದೆ.
ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಕುರಿತು:
- ರಾಷ್ಟ್ರಗಳು ತಮ್ಮ ‘ರಾಷ್ಟ್ರೀಯ ನಿರ್ಧರಿತ ಕೊಡುಗೆ’ (NDCs)ಗಳನ್ನು ಸಾಧಿಸಲು ಸ್ವಯಂಪ್ರೇರಿತವಾಗಿ ಪರಸ್ಪರ ಸಹಕರಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ಈ ವಿಧಿಯು ಸೃಷ್ಟಿಸುತ್ತದೆ. ಇದು ಪ್ರಮುಖವಾಗಿ 2 ಮಾರ್ಗಗಳನ್ನು ಒಳಗೊಂಡಿದೆ:
- ವಿಧಿ 6.2- ಅಂತರರಾಷ್ಟ್ರೀಯವಾಗಿ ವರ್ಗಾಯಿಸಲಾದ ಹೊರಸೂಸುವಿಕೆಯ ಕಡಿತದ ಫಲಿತಾಂಶಗಳು (ITMOs):- ಇದು ಹೊರಸೂಸುವಿಕೆ ಕಡಿತಗಳ ವ್ಯಾಪಾರದ ಮೂಲಕ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರಕ್ಕೆ ಅವಕಾಶ ನೀಡುತ್ತದೆ.
- ವಿಧಿ 6.4- ಪ್ಯಾರಿಸ್ ಒಪ್ಪಂದದ ಸಾಲದ ಕಾರ್ಯವಿಧಾನ (PACM):- ಇದು ಕೇಂದ್ರೀಕೃತ ಸಾಲದ ಕಾರ್ಯವಿಧಾನ(PACM) ವನ್ನು ಸ್ಥಾಪಿಸುತ್ತದೆ. ಇದು ಹಿಂದಿನ “ಶುದ್ಧ ಅಭಿವೃದ್ಧಿ ಕಾರ್ಯವಿಧಾನ” (CDM) ದಿಂದ ವಿಕಸನಗೊಂಡಿದ್ದು, ಇಂಗಾಲದ ಶ್ರೇಯಗಳನ್ನು ಉತ್ಪಾದಿಸುವ ಯೋಜನೆಗಳನ್ನು ಮೌಲ್ಯೀಕರಿಸಲು ಮತ್ತು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ.
- ಈ 2 ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಪರಿಸರ ಸಮಗ್ರತೆಯನ್ನು ಖಚಿತಪಡಿಸಲು ಹಾಗೂ ದ್ವಿಗುಣ ಎಣಿಕೆಯನ್ನು ತಪ್ಪಿಸಲು ಕಠಿಣವಾದ ಲೆಕ್ಕಪತ್ರ ನಿಯಮಗಳಿಂದ ಬೆಂಬಲಿತವಾಗಿವೆ.
ಭಾರತ ಮತ್ತು ಜಂಟಿ ಸಾಲದ ಕಾರ್ಯವಿಧಾನ (JCM)ದ ಬಗ್ಗೆ:
ಭಾರತವು ಜಪಾನ್ನೊಂದಿಗಿನ JCM ಪಾಲುದಾರಿಕೆಯ ಮೂಲಕ 6ನೇ ವಿಧಿಗೆ ಪ್ರವೇಶಿಸಿರುವುದು, ವಿಧಿ 6.2ರ ಪ್ರಾಯೋಗಿಕ ಅನುಷ್ಠಾನವನ್ನು ಪ್ರತಿನಿಧಿಸುತ್ತದೆ.
- JCM ನ ಕಾರ್ಯವಿಧಾನ:- ಈ ಚೌಕಟ್ಟು ಕಡಿಮೆ ಇಂಗಾಲದ ಮತ್ತು ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡುತ್ತದೆ.
- ಪರಸ್ಪರ ಲಾಭ:- ಇದು ಜಪಾನ್ಗೆ ಹೊರಸೂಸುವಿಕೆ ಕಡಿತದ ಲಾಭವನ್ನು ನೀಡಿದರೆ, ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಮತ್ತು ಆರ್ಥಿಕ ನೆರವಿನ ರೂಪದಲ್ಲಿ ಲಾಭದಾಯಕವಾಗಿದೆ.
ಭಾರತ ಸರ್ಕಾರವು 6ನೇ ವಿಧಿಯ ಅಡಿಯಲ್ಲಿ ಗುರುತಿಸಲಾದ 13 ಅರ್ಹ ಚಟುವಟಿಕೆಗಳು:
- ಇವು ಹೆಚ್ಚಿನ ಪ್ರಭಾವ ಬೀರುವ ಈ ಕೆಳಗಿನ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿವೆ. ಅವುಗಳೆಂದರೆ,
- ನವೀಕರಿಸಬಹುದಾದ ಇಂಧನ:- ಶೇಖರಣಾ ವ್ಯವಸ್ಥೆಯುಳ್ಳ ನವೀಕರಿಸಬಹುದಾದ ಇಂಧನ ಮತ್ತು ಕಡಲಾಚೆಯ ಪವನ ಶಕ್ತಿ.
- ಹಸಿರು ಇಂಧನಗಳು:- ಹಸಿರು ಜಲಜನಕ ಮತ್ತು ಸಂಕುಚಿತ ಜೈವಿಕ ಅನಿಲ.
- ಸಾರಿಗೆ ವಲಯ:– ಸುಸ್ಥಿರ ವಿಮಾನಯಾನ ಇಂಧನ ಮತ್ತು ಇಂಧನ ಕೋಶ ಆಧಾರಿತ ಚಲನಶೀಲತೆ.
- ಇಂಧನ ದಕ್ಷತೆ:- ಅತ್ಯುನ್ನತ ಇಂಧನ ದಕ್ಷತೆಯ ತಂತ್ರಜ್ಞಾನಗಳ ಅಳವಡಿಕೆ.
- ಇಂಗಾಲದ ನಿರ್ವಹಣೆ:- ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ (CCUS).
ಮಹತ್ವ:
- ಈ ಕ್ರಮಗಳು ಭಾರತದ ಅಭಿವೃದ್ಧಿ ಆದ್ಯತೆಗಳು ಮತ್ತು ದೀರ್ಘಕಾಲೀನ ಇಂಗಾಲದ ಅಂಶವನ್ನು ಕಡಿತಗೊಳಿಸುವ (ಡಿ-ಕಾರ್ಬೊನೈಸೇಶನ್) ಗುರಿಗಳ ನಡುವಿನ ಕಾರ್ಯತಂತ್ರದ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಂತಹ ‘ಕಠಿಣ-ನಿಯಂತ್ರಣದ’ ಕೈಗಾರಿಕೆಗಳಿಗೆ ಇವು ನಿರ್ಣಾಯಕವಾಗಿವೆ.
ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ
ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ರಾಜಸ್ಥಾನದ ಬಮನ್ವಾಸ್ ಕಂಕರ್ ಪಂಚಾಯತಿ, ರಾಜ್ಯದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಈ ಪಂಚಾಯತಿ 7 ಚಿಕ್ಕ ಗ್ರಾಮಗಳನ್ನು ಒಳಗೊಂಡಿದೆ.
ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ:
- ರಾಸಾಯನಿಕ ಮುಕ್ತ ಕೃಷಿ ಪದ್ದತಿ:- ಇದು ಜಾನುವಾರುಗಳನ್ನು (ಆದ್ಯತೆ ಮೇರೆಗೆ ಸ್ಥಳೀಯ ತಳಿಯ ಹಸು) ಒಳಗೊಂಡ ಸಮಗ್ರ ನೈಸರ್ಗಿಕ ಕೃಷಿ ವಿಧಾನಗಳು ಮತ್ತು ಭಾರತೀಯ ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ವೈವಿಧ್ಯಮಯ ಬೆಳೆ ಪದ್ಧತಿ ವ್ಯವಸ್ಥೆಯನ್ನು ಒಳಗೊಂಡಿದೆ.
- ಕೃಷಿ ತ್ಯಾಜ್ಯ ಮರುಬಳಕೆಯನ್ನು ಆಧರಿಸಿದೆ:- ಇದರಲ್ಲಿ ಜೈವಿಕ ಹೊದಿಕೆ ಹಾಕುವುದು (ಬಯೋಮಾಸ್ ಮಲ್ಚಿಂಗ್), ಹಸುಮೂತ್ರ ಮತ್ತು ಸಗಣಿಯ ಮಿಶ್ರಣಗಳ ಬಳಕೆ, ಮಣ್ಣಿನ ಗಾಳಿಯಾಡುವಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಕೃತಕ ರಾಸಾಯನಿಕ ಒಳಹರಿವುಗಳನ್ನು ನಿಷೇಧಿಸುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ರಾಷ್ಟ್ರೀಯ ನೈಸರ್ಗಿಕ ಕೃಷಿ ಗುರಿ (NMNF)ಯ ಬಗ್ಗೆ:
- ಪ್ರಾರಂಭ:- ನವೆಂಬರ್ 2024.
- ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಉದ್ದೇಶ:- ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಮತ್ತು ಪರಿಸರ ವ್ಯವಸ್ಥೆ ಆಧಾರಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು.
ಇಸ್ರೋದ PSLV-C62/EOS-N1 ಮಿಷನ್ನ ಮೂರನೇ ಹಂತದಲ್ಲಿ ವೈಫಲ್ಯ
ಸಾಮಾನ್ಯ ಅಧ್ಯಯನ-3/ ಬಾಹ್ಯಾಕಾಶ
ಇದೀಗ ಸುದ್ದಿಯಲ್ಲಿದೆ:
- 2026ನೇ ವರ್ಷದ ಮೊದಲ ಉಡಾವಣೆಯಾಗಿದ್ದ ಇಸ್ರೋದ PSLV-C62 ಮಿಷನ್, ತನ್ನ 16 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ವಿಫಲವಾಯಿತು. ಇದರಿಂದ, ದೀರ್ಘಕಾಲದಿಂದ ವಿಶ್ವಾಸಾರ್ಹವಾಗಿದ್ದ PSLV ರಾಕೆಟ್ಗೆ ಇದು ಸತತವಾಗಿ ಎರಡನೇ ವೈಫಲ್ಯತೆ ಎಂಬುದಾಗಿ ದಾಖಲಾಗಿದೆ.
PSLV-C62 / EOS-N1 ಮಿಷನ್ ನ ಬಗ್ಗೆ:
- ಇದು ಭಾರತದ PSLVಯ 64ನೇ ಹಾರಾಟ ಮತ್ತು ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ (NSIL)ನ 9ನೇ ವಾಣಿಜ್ಯ ಗುರಿ ಆಗಿತ್ತು.
- ಇದು EOS-N1 ಭೂ ವೀಕ್ಷಣಾ ಉಪಗ್ರಹದೊಂದಿಗೆ 15 ಸಹ-ಪ್ರಯಾಣಿಕ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿತ್ತು.
- EOS-N1 ಉಪಗ್ರಹವು ಪರಿಸರ ಮೇಲ್ವಿಚಾರಣೆ, ಸಂಪನ್ಮೂಲಗಳ ನಕ್ಷೆ ತಯಾರಿಕೆ ಮತ್ತು ವಿಪತ್ತು ನಿರ್ವಹಣೆಗಾಗಿ ರೂಪಿಸಲಾದ ಭೂ ವೀಕ್ಷಣಾ ಉಪಗ್ರಹವಾಗಿದೆ.
ಧ್ರುವೀಯ ಉಪಗ್ರಹ ಉಡಾವಣಾ ವಾಹನ (PSLV)ಗಳ ಬಗ್ಗೆ:
- ಇದು ಭಾರತದ 3ನೇ ತಲೆಮಾರಿನ ಉಡಾವಣಾ ವಾಹನವಾಗಿದೆ.
- “ಇಸ್ರೋದ ವರ್ಕ್ಹಾರ್ಸ್”:- ಕಾರಣ, ವಿವಿಧ ಉಪಗ್ರಹಗಳನ್ನು ‘ಕೆಳ ಭೂ ಕಕ್ಷೆಗಳಿಗೆ’ (LEO) ಹೆಚ್ಚಿನ ಯಶಸ್ಸಿನ ದರದೊಂದಿಗೆ ಸೇರಿಸುತ್ತದೆ.
- ದ್ರವ ಹಂತಗಳನ್ನು ಅಳವಡಿಸಿಕೊಂಡಿರುವ ಭಾರತದ ಮೊದಲ ಉಡಾವಣಾ ವಾಹನ ಇದಾಗಿದೆ.
- ಇದು 4 ಹಂತದ ಉಡಾವಣಾ ವಾಹನವಾಗಿದ್ದು, ಪ್ರತಿ ಹಂತವು ತನ್ನದೇ ಆದ ಎಂಜಿನ್ ಮತ್ತು ಇಂಧನವನ್ನು ಹೊಂದಿರುತ್ತದೆ.
ಪ್ರಮುಖ ಉಡಾವಣೆಗಳು:
- ಅಕ್ಟೋಬರ್, 1994ರಲ್ಲಿ ಇದರ ಮೊದಲ ಯಶಸ್ವಿ ಉಡಾವಣೆ ನಡೆಯಿತು.
- PSLV ಪ್ರಮುಖ 2 ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಅವುಗಳೆಂದರೆ,
- 2008ರಲ್ಲಿ ಚಂದ್ರಯಾನ-1
- 2013ರಲ್ಲಿ ಮಂಗಳಯಾನ (ಮಾರ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆ)
- ಇವು ನಂತರ ಕ್ರಮವಾಗಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಪ್ರಯಾಣ ಬೆಳೆಸಿದವು.
- ಇದು ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾದ ‘ಆಸ್ಟ್ರೋಸ್ಯಾಟ್’ ಅನ್ನು ಸಹ ಉಡಾವಣೆ ಮಾಡಿದೆ.
ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV):
- ಇದು ಭಾರತದ ಅತಿದೊಡ್ಡ 4ನೇ ತಲೆಮಾರಿನ ಉಡಾವಣಾ ವಾಹನವಾಗಿದೆ. PSLV ಉಡಾವಣಾ ವಾಹನದ ಮಿತಿಗಳನ್ನು ಮೀರುವ ಉದ್ದೇಶದಿಂದ, ಹೆಚ್ಚಿನ ಭಾರವಾದ ಉಪಗ್ರಹಗಳನ್ನು ಹೆಚ್ಚಿನ ಎತ್ತರದ ಕಕ್ಷೆಗಳಿಗೆ ಕೊಂಡೊಯ್ಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- 3 ಹಂತದ ಉಡಾವಣ ವಾಹನವಾಗಿದೆ:- ಇದು 1,750 ಕೆಜಿಯಷ್ಟು ತೂಕವನ್ನು ಕೆಳ ಭೂ ಕಕ್ಷೆಗೆ (600 ಕಿ.ಮೀ ವರೆಗೆ) ಮತ್ತು ಕಡಿಮೆ ಭಾರದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.
- ಕ್ರಯೋಜೆನಿಕ್ ಎಂಜಿನ್ಗಳನ್ನು ಬಳಸುತ್ತದೆ:- ಅಂದರೆ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕವನ್ನು ಒಟ್ಟಿಗೆ ಉಪಯೋಗಿಸುತ್ತವೆ. ಇವು ಹಿಂದಿನ ಉಡಾವಣಾ ವಾಹನಗಳಿಗಿಂತ ಅತೀ ಹೆಚ್ಚಿನ ನೂಕುಬಲವನ್ನು ನೀಡುತ್ತವೆ.
- LVM-3 (ಹಿಂದೆ GSLV Mk III):- ಇದು GSLVಯ ಸುಧಾರಿತ ಆವೃತ್ತಿಯಾಗಿದೆ. ಇದು ಘನ, ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್ಗಳನ್ನು ಬಳಸುತ್ತದೆ.
- ಇದು ಕೆಳ ಭೂಮಿಯ ಕಕ್ಷೆಗೆ (2,000 ಕಿಮೀ ವರೆಗೆ) ಗರಿಷ್ಠ 8,000 ಕೆ.ಜಿ ಭಾರವನ್ನು,
- ಭೂಸ್ಥಾಯೀ ಕಕ್ಷೆಗೆ (36,000 ಕಿಮೀ) ಗರಿಷ್ಠ 4,000 ಕೆ.ಜಿ ಭಾರವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯದಿಂದಾಗಿ ಇದಕ್ಕೆ ‘ಬಾಹುಬಲಿ’ ಎಂಬ ಹೆಸರು ಬಂದಿದೆ.
LVM-3 ಯ ಪ್ರಮುಖ ಉಡಾವಣೆಗಳು:
- LVM-3 ನ ಮೊದಲ ಯಶಸ್ವಿ ಮಿಷನ್ 2017ರಲ್ಲಿ GSAT-19 ನೊಂದಿಗೆ ಉಡಾವಣೆಯಾಯಿತು.
- ನಂತರ 2019ರಲ್ಲಿ ಚಂದ್ರಯಾನ-2 ಮತ್ತು 2023ರಲ್ಲಿ ಚಂದ್ರಯಾನ-3 ಉಡಾವಣೆಯಾದವು.
|
ಗಮನಿಸಿ: ಇಸ್ರೋ ತನ್ನ ಅತ್ಯಂತ ಭಾರವಿರುವ ಉಡಾವಣಾ ವಾಹನವಾದ ‘ಲೂನಾರ್ ಮಾಡ್ಯೂಲ್ ಉಡಾವಣಾ ವಾಹನ’ (LMLV) ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು 2035ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, 2040ಕ್ಕೆ ಯೋಜಿಸಲಾದ ಭಾರತದ ಮೊದಲ ಮಾನವ ಸಹಿತ ಚಂದ್ರಯಾನ ಸೇರಿದಂತೆ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳನ್ನು ಬೆಂಬಲಿಸಲಿದೆ. |
ಭದ್ರಕಾಳಿ ಶಾಸನ
ಸಾಮಾನ್ಯ ಅಧ್ಯಯನ- 1/ ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ‘ಪ್ರಭಾಸ್ ಪಟಾನ್’ ಶ್ರೀಮಂತ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ ಎಂಬ ವಿಷಯವು ಮುನ್ನೆಲೆಗೆ ಬಂದಿದೆ. ಇಲ್ಲಿನ ಭದ್ರಕಾಳಿ ಶಾಸನ, ತಾಮ್ರದ ಫಲಕಗಳು ಮತ್ತು ಸ್ಮಾರಕ ಕಲ್ಲುಗಳು ಈ ಸ್ಥಳದ ಸಮೃದ್ಧಿ, ಶೌರ್ಯ ಮತ್ತು ಭಕ್ತಿಯನ್ನು ಎತ್ತಿ ತೋರಿಸುತ್ತವೆ.
- ಗಮನಿಸಿ:- ಪ್ರಭಾಸ್ ಪಟಾನ್ (ಇದನ್ನು ‘ದೇವ್ ಪಟಾನ್’ ಎಂತಲೂ ಕರೆಯುತ್ತಾರೆ) ಗುಜರಾತ್ನ ವೆರಾವಲ್ನಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ತಾಣವಾಗಿದೆ. ಇದು ಪ್ರಸಿದ್ಧ ಸೋಮನಾಥ ದೇವಾಲಯದ ನೆಲೆಬೀಡಾಗಿದೆ. ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದನ್ನು ಹೊಂದಿರುವ ಈ ತಾಣವು, ಭಾರತದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.
‘ಭದ್ರಕಾಳಿ ಶಾಸನ’ದ ಬಗ್ಗೆ:
- ಇದನ್ನು ಕ್ರಿ.ಶ. 1169 ರಲ್ಲಿ (ವಲಭಿ ಸಂವತ್ 850 ಮತ್ತು ವಿಕ್ರಮ ಸಂವತ್ 1255) ಕೆತ್ತಲಾಗಿದೆ. ಪ್ರಸ್ತುತ ಇದು ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ.
- ಇದು ಪ್ರಭಾಸ್ ಪಟಾನ್ನಲ್ಲಿರುವ ವಸ್ತುಸಂಗ್ರಹಾಲಯದ ಬಳಿ, ಭದ್ರಕಾಳಿ ರಸ್ತೆಯಲ್ಲಿರುವ ಹಳೆಯ ರಾಮ ಮಂದಿರದ ಪಕ್ಕದಲ್ಲಿದೆ.
- ಇದು ಅನ್ಹಿಲ್ವಾಡ್ ಪಟಾನ್ನ ಮಹಾರಾಜಾಧಿರಾಜ ಕುಮಾರಪಾಲನ ಆಧ್ಯಾತ್ಮಿಕ ಗುರುಗಳಾದ ‘ಪರಮ ಪಾಶುಪತ ಆಚಾರ್ಯ ಶ್ರೀಮಾನ್ ಭಾವಬೃಹಸ್ಪತಿ’ ಅವರ ಕುರಿತಾದ ಪ್ರಶಂಸಾತ್ಮಕ ಶಾಸನವಾಗಿದೆ.
ಈ ಶಾಸನದ ವೈಶಿಷ್ಟ್ಯಗಳು:
- ಈ ಶಾಸನವು ಸೋಮನಾಥ ದೇವಾಲಯದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸವನ್ನು ದಾಖಲಿಸುತ್ತದೆ.
- ನಾಲ್ಕು ಯುಗಗಳಲ್ಲಿ ಸೋಮನಾಥ ಮಹಾದೇವ ದೇವಾಲಯದ ನಿರ್ಮಾಣವನ್ನು ಇದು ಉಲ್ಲೇಖಿಸುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ:
- ಸತ್ಯ ಯುಗದಲ್ಲಿ:- ಚಂದ್ರನು (ಸೋಮ) ಇದನ್ನು ಚಿನ್ನದಿಂದ ನಿರ್ಮಿಸಿದನು.
- ತ್ರೇತಾ ಯುಗದಲ್ಲಿ:- ರಾವಣನು ಇದನ್ನು ಬೆಳ್ಳಿಯಿಂದ ನಿರ್ಮಿಸಿದನು.
- ದ್ವಾಪರ ಯುಗದಲ್ಲಿ:– ಶ್ರೀ ಕೃಷ್ಣನು ಇದನ್ನು ಮರದಿಂದ ನಿರ್ಮಿಸಿದನು.
- ಕಲಿ ಯುಗದಲ್ಲಿ:– ರಾಜ ಭೀಮದೇವ ಸೋಲಂಕಿ ಸುಂದರವಾದ ಕಲಾತ್ಮಕ ಕಲ್ಲಿನ ದೇವಾಲಯವನ್ನು ನಿರ್ಮಿಸಿದನು.
- ರಾಜ ಭೀಮದೇವ ಸೋಲಂಕಿಯು ಹಿಂದಿನ ಅವಶೇಷಗಳ ಮೇಲೆ ನಾಲ್ಕನೇ ದೇವಾಲಯವನ್ನು ನಿರ್ಮಿಸಿದನು ಎಂಬುದನ್ನು ಇತಿಹಾಸವು ದೃಢೀಕರಿಸುತ್ತದೆ. ತದನಂತರ ಮಹಾರಾಜಾಧಿರಾಜ ಕುಮಾರಪಾಲನು ಕ್ರಿ.ಶ. 1169 ರಲ್ಲಿ ಅದೇ ಸ್ಥಳದಲ್ಲಿ ಐದನೇ ದೇವಾಲಯವನ್ನು ನಿರ್ಮಿಸಿದನು.
ಈ ಶಾಸನದ ಮಹತ್ವ:
- ಪ್ರಭಾಸ್ ಪಟಾನ್ ಸನಾತನ ಧರ್ಮದ ಆಧ್ಯಾತ್ಮಿಕ ಹೆಮ್ಮೆಯನ್ನು ಸಂಕೇತಿಸುತ್ತದೆ.
- ಭದ್ರಕಾಳಿ ಶಾಸನವು ಸೋಲಂಕಿ ಆಡಳಿತಗಾರರು ಮತ್ತು ಭಾವಬೃಹಸ್ಪತಿಯಂತಹ ವಿದ್ವಾಂಸರ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಇಲ್ಲಿನ ಶ್ರೀಮಂತ ಕಲಾತ್ಮಕ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ ಪರಂಪರೆಯು ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ. ಭಕ್ತಿ ಮತ್ತು ಸ್ವಾಭಿಮಾನ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಇದು ದೃಢೀಕರಿಸುತ್ತದೆ.
ಪ್ಯಾಕ್ಸ್ ಸಿಲಿಕಾ
ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಸೇರ್ಪಡೆಗೊಳ್ಳಲು ಮುಂದಿನ ತಿಂಗಳು ಭಾರತವನ್ನು ಆಹ್ವಾನಿಸಲಾಗುವುದು ಎಂದು ಅಮೆರಿಕದ ರಾಯಭಾರಿ ಘೋಷಿಸಿದ್ದಾರೆ.
‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದ ಬಗ್ಗೆ:
- ಉದ್ದೇಶ:- ಇದು ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ. ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ‘ಸಿಲಿಕಾನ್ ಪೂರೈಕೆ ಸರಪಳಿ’ಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
- ಶೃಂಗಸಭೆ:- ಮೊದಲ ಪ್ಯಾಕ್ಸ್ ಸಿಲಿಕಾ ಶೃಂಗಸಭೆಯು ಡಿಸೆಂಬರ್ 2025 ರಲ್ಲಿ ನಡೆಯಿತು.
- ಸದಸ್ಯ ರಾಷ್ಟ್ರಗಳು:- ಆಸ್ಟ್ರೇಲಿಯಾ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ನೆದರ್ಲ್ಯಾಂಡ್ಸ್ ಮತ್ತು ಯುಎಇ ದೇಶಗಳು ಈ ಉಪಕ್ರಮಕ್ಕೆ ಸಹಿ ಹಾಕಿವೆ.
- ಸದಸ್ಯ ರಾಷ್ಟ್ರಗಳ ವ್ಯಾಪ್ತಿ:- ಜಾಗತಿಕ ಕೃತಕ ಬುದ್ಧಿಮತ್ತೆ (AI) ಪೂರೈಕೆ ಸರಪಳಿಯನ್ನು ಸಶಕ್ತಗೊಳಿಸುವ ಅತ್ಯಂತ ಪ್ರಮುಖ ಕಂಪನಿಗಳು ಮತ್ತು ಹೂಡಿಕೆದಾರರನ್ನು ಒಟ್ಟಾರೆಯಾಗಿ ಈ ದೇಶಗಳು ಹೊಂದಿವೆ.
- ಕತಾರ್:- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಸಹಿ ಹಾಕಿದ ಇತ್ತೀಚಿನ ರಾಷ್ಟ್ರವಾಗಿದೆ.
ಮಹತ್ವ:
- ಬಲವಂತದ ಅವಲಂಬನೆಯನ್ನು ಕಡಿಮೆ ಮಾಡುವುದು.
- ಕೃತಕ ಬುದ್ಧಿಮತ್ತೆಗೆ ಅಡಿಪಾಯವಾಗಿರುವ ಸಾಮಗ್ರಿಗಳನ್ನು ಮತ್ತು ಸಾಮರ್ಥ್ಯಗಳನ್ನು ರಕ್ಷಿಸುವುದು.
- ಸಮಾನ ಮನಸ್ಕ ರಾಷ್ಟ್ರಗಳು ಪರಿವರ್ತಕ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಮತ್ತು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು.
ಭಾರತಕ್ಕೆ ಇದರ ಮಹತ್ವ:
- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಭಾರತವು ಸೇರ್ಪಡೆಯಾಗುವುದರಿಂದ, ನಿರ್ಣಾಯಕ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಂತಹ ಹೆಚ್ಚು ಸುರಕ್ಷಿತ ಪೂರೈಕೆದಾರರತ್ತ ತನ್ನ ಆಮದು ಮೂಲಗಳನ್ನು ವೈವಿಧ್ಯಮಯಗೊಳಿಸಲು ಇದು ನೆರವಾಗಲಿದೆ.



ನಿಮ್ಮದೊಂದು ಉತ್ತರ