ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆ | 2025ರಲ್ಲಿ ಅಂಟಾರ್ಕ್ಟಿಕಾದ ಓಜೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಿದೆ | ಅಸ್ಸಾಂನಲ್ಲಿ ಎರಡು ರಣಹದ್ದು ಪ್ರಭೇದಗಳನ್ನು ಮರು ಪರಿಚಯಿಸಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) | ಕುಷ್ಠರೋಗ (Leprosy) | ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು (iMPs – Inhalable Microplastics) | ಭಾರತದಲ್ಲಿ ಆಕ್ರಮಣಕಾರಿ ವಿದೇಶಿ ಸಸ್ಯಗಳು (Invasive Alien Plants) | ವಿಶ್ವ ಮಣ್ಣಿನ ದಿನ | ಕೂನೋ ರಾಷ್ಟ್ರೀಯ ಉದ್ಯಾನವನ

ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆ

ಸಾಮಾನ್ಯ ಅಧ್ಯಯನ – 2/ ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ; ಸಾಮಾನ್ಯ ಅಧ್ಯಯನ- 3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆಯ ಕಾಲಮಿತಿಯನ್ನು ವಿಸ್ತರಿಸಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಭದ್ರತೆಯ ಮೇಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ಪಿಎಂ ಜಿ-ವನ್ ಯೋಜನೆಯ ಬಗ್ಗೆ:

  • ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
  • ಅನುಷ್ಠಾನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ. 
  • ಉದ್ದೇಶ:– 2ಜಿ ಎಥೆನಾಲ್ ಯೋಜನೆಗಳನ್ನು ಉತ್ತೇಜಿಸುವುದು, ಕೃಷಿ ತ್ಯಾಜ್ಯವನ್ನು (ಬಯೋಮಾಸ್) ಬಳಸುವುದು, ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಗುರಿಗಳನ್ನು ತಲುಪುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ನಿವ್ವಳ-ಶೂನ್ಯ ಹೊರಸೂಸುವಿಕೆಯಂತಹ ಪರಿಸರ ಸಂಬಂಧಿತ ಗುರಿಗಳಿಗೆ ಸಹಾಯ ಮಾಡುವುದು.
  • ವಿಧಾನ:– ಈ ಯೋಜನೆಯು ಪೆಟ್ರೋಕೆಮಿಕಲ್ ಮಾರ್ಗದ ಬದಲಾಗಿ ಕಾಕಂಬಿ ಮತ್ತು ಖಾದ್ಯವಲ್ಲದ ಕೃಷಿ ತ್ಯಾಜ್ಯದಂತಹ ಜೈವಿಕ ರಾಶಿಯಿಂದ ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ.

ಈ ಯೋಜನೆಯ ಮಹತ್ವ:

  • ಇಂಧನ ಭದ್ರತೆ:- ಪಳೆಯುಳಿಕೆ ಇಂಧನ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು.
  • ಗ್ರಾಮೀಣ ಆರ್ಥಿಕತೆ:- ರೈತರಿಗೆ ತಮ್ಮ ಕೃಷಿ ತ್ಯಾಜ್ಯಗಳಿಗೆ ಹೊಸ ಮಾರುಕಟ್ಟೆಗಳನ್ನು ಒದಗಿಸುವುದು, ಆ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು.
  • ಪರಿಸರ:– ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ಎದುರಿಸುವುದು, ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗೆ ಕೊಡುಗೆ ನೀಡುವುದು.
  • ಹೂಡಿಕೆ:- 2ಜಿ ಎಥೆನಾಲ್ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದು.
  • ಉದಾಹರಣೆ:– ಈ ಯೋಜನೆಯಡಿ ಸ್ಥಾಪಿಸಲಾದ ಭಾರತದ ಮೊದಲ 2ಜಿ ಎಥೆನಾಲ್ ಯೋಜನೆಯನ್ನು ಪಾಣಿಪತ್‌ನಲ್ಲಿರುವ ಐಒಸಿಎಲ್ ನಲ್ಲಿ 2022 ರಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಜೈವಿಕ ಇಂಧನಗಳ ಬಗ್ಗೆ:

  • ವ್ಯಾಖ್ಯಾನ:- ಜೈವಿಕ ಇಂಧನಗಳು ಸಸ್ಯ ಮತ್ತು ಸಸ್ಯಜನ್ಯ ಸಂಪನ್ಮೂಲಗಳಿಂದ ತಯಾರಿಸಿದ ಪರ್ಯಾಯ ಇಂಧನಗಳಾಗಿವೆ.
  • ಉದಾಹರಣೆ: ಬಯೋಎಥೆನಾಲ್, ಬಯೋಡೀಸೆಲ್, ಹಸಿರು ಡೀಸೆಲ್, ಜೈವಿಕ ಅನಿಲ ಇತ್ಯಾದಿ.

ರಾಷ್ಟ್ರೀಯ ಜೈವಿಕ ಇಂಧನ ನೀತಿ, 2018 ರ ಬಗ್ಗೆ:

  • ಇದನ್ನು 2022 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇಂಧನ ಭದ್ರತೆಯನ್ನು ಹೆಚ್ಚಿಸಲು ಭಾರತದಲ್ಲಿ ಜೈವಿಕ ಇಂಧನಗಳ ಬಳಕೆಯನ್ನು ಹೆಚ್ಚಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ.

ಜೈವಿಕ ಇಂಧನ ವಿಸ್ತರಣೆಗೆ ಸರ್ಕಾರದ ಪ್ರಯತ್ನಗಳು:

  • ಪ್ರಧಾನ ಮಂತ್ರಿ ಜಿ-ವನ್ ಯೋಜನೆ (ಜೈವಿಕ ಇಂಧನ – ವಾತಾವರಣ ಅನುಕೂಲ ಫಸಲ್ ಅವಶೇಷ ನಿವಾರಣ್ ಯೋಜನೆ):- ಇದು ಕೃಷಿ ತ್ಯಾಜ್ಯ ಮತ್ತು ಅವಶೇಷಗಳಿಂದ 2ಜಿ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
  • ಗೋಬರ್-ಧನ್ (GOBAR-Dhan- ಗ್ಯಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಅಗ್ರೋ ರಿಸೋರ್ಸಸ್ ಧನ್) ಯೋಜನೆ:- ಇದು ಜಾನುವಾರುಗಳ ಸಗಣಿ ಮತ್ತು ಸಾವಯವ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಜೈವಿಕ -ಸಿಎನ್‌ಜಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
  • ಸತತ್ (SATAT- ಕೈಗೆಟುಕುವ ಸಾರಿಗೆಯ ಕಡೆಗೆ ಸುಸ್ಥಿರ ಪರ್ಯಾಯ) ಯೋಜನೆ:- ಇದು ಇಂಧನ ಪರ್ಯಾಯವಾಗಿ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಯನ್ನು ಉತ್ತೇಜಿಸುತ್ತದೆ.

2025ರಲ್ಲಿ ಅಂಟಾರ್ಕ್ಟಿಕಾದ ಓಜೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಿದೆ

ಸಾಮಾನ್ಯ ಅಧ್ಯಯನ- 3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ಆಗಸ್ಟ್ 2025 ರಲ್ಲಿ ರೂಪುಗೊಂಡ ಅಂಟಾರ್ಕ್ಟಿಕಾದ ಓಝೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಲ್ಪಟ್ಟಿದೆ. ಜಾಗತಿಕ ತಾಪಮಾನ ಏರಿಕೆಯ ದಾಖಲೆಯ ನಡುವೆಯೂ ಈ ವಿದ್ಯಮಾನವು ಪರಿಸರ ಚೇತರಿಕೆಯ ಭರವಸೆಯನ್ನು ಮೂಡಿಸಿದೆ.

ಓಝೋನ್ ಪದರ (O3) ದ ಬಗ್ಗೆ:

  • ಇದು ಮೂರು ಆಮ್ಲಜನಕದ ಪರಮಾಣುಗಳನ್ನು ಹೊಂದಿರುವ ಅತ್ಯಂತ ಪ್ರತಿಕ್ರಿಯಾತ್ಮಕ ಅಣುವಾಗಿದೆ.
  • ಕಂಡುಬರುವ ಸ್ಥಳ:- ಇದು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ ನಿಂದ 50 ಕಿ.ಮೀ ನಡುವಿನ ಎತ್ತರದಲ್ಲಿರುವ, ಸಮೋಷ್ಣ ಮಂಡಲ (‘ಸ್ಟ್ರಾಟೋಸ್ಪಿಯರ್’) ಎಂದು ಕರೆಯಲ್ಪಡುವ ವಾತಾವರಣದ ಸ್ತರದಲ್ಲಿ ಕಂಡುಬರುತ್ತದೆ.
  • ಕಾರ್ಯ:- ಈ ಓಝೋನ್ ಪದರವು ಸೂರ್ಯನಿಂದ ಬರುವ ಹಾನಿಕಾರಕ ಅತಿನೇರಳೆ (UV) ವಿಕಿರಣವನ್ನು ತಡೆಯುವಲ್ಲಿ ನೈಸರ್ಗಿಕ ಶೋಧಕವಾಗಿ ಕಾರ್ಯನಿರ್ವಹಿಸುತ್ತದೆ.
  • ಮಹತ್ವ:- ಭೂಮಿಯ ಮೇಲಿನ ಮಾನವ ಜೀವ ಸಂಕುಲದ ಅಸ್ತಿತ್ವ ಮತ್ತು ಉಳಿವಿಗೆ ಈ ಓಝೋನ್ ರಕ್ಷಾ ಕವಚ ಅತ್ಯಗತ್ಯವಾಗಿದೆ.

ಓಝೋನ್ ಪದರದ ಸವಕಳಿಯ ಬಗ್ಗೆ:

  • ವ್ಯಾಖ್ಯಾನ:- ವಾತಾವರಣದ ಮಧ್ಯದ ಸ್ತರಗಳಲ್ಲಿ – ಮುಖ್ಯವಾಗಿ ಸಮೋಷ್ಣ ಮಂಡಲದಲ್ಲಿ ಓಝೋನ್ ಸಾಂದ್ರತೆಯು ಕಡಿಮೆಯಾಗುವುದನ್ನು ಅಥವಾ ಕುಸಿಯುವುದನ್ನು ‘ಓಝೋನ್ ಪದರದ ಸವಕಳಿ’ ಎಂದು ಕರೆಯಲಾಗುತ್ತದೆ.
  • ಕಾರಣಗಳು:- ಸಿಎಫ್‌ಸಿಗಳು (CFCs), ಎಚ್‌ಸಿಎಫ್‌ಸಿಗಳು (HCFCs), ಹ್ಯಾಲೋನ್‌ಗಳು, ಕಾರ್ಬನ್ ಟೆಟ್ರಾಕ್ಲೋರೈಡ್ ಮತ್ತು ಮೀಥೈಲ್ ಬ್ರೋಮೈಡ್‌ನಂತಹ ಮಾನವ ನಿರ್ಮಿತ ಹ್ಯಾಲೋಜನೇಟೆಡ್ ಹೈಡ್ರೋಕಾರ್ಬನ್‌ಗಳ ಹೊರಸೂಸುವಿಕೆಯಿಂದ ಇದು ಉಂಟಾಗುತ್ತದೆ.

ಸಮಭಾಜಕ ವೃತ್ತಕ್ಕಿಂತ ಅಂಟಾರ್ಕ್ಟಿಕಾದಲ್ಲಿ ಓಝೋನ್ ಪದರದ ಸವಕಳಿ ಏಕೆ ಹೆಚ್ಚಾಗಿದೆ?

  • ಜಗತ್ತಿನ ಬೇರೆಲ್ಲಿಯೂ ಇಲ್ಲದ ವಿಶಿಷ್ಟ ಹವಾಮಾನ ಪರಿಸ್ಥಿತಿಗಳು ಅಂಟಾರ್ಕ್ಟಿಕಾದಲ್ಲಿ ಇರುವುದರಿಂದ, ಅಲ್ಲಿ ಓಝೋನ್ ಪದರದ ತೀವ್ರ ಸವಕಳಿ ಉಂಟಾಗಿ “ಓಝೋನ್ ರಂಧ್ರ” ಸೃಷ್ಟಿಯಾಗುತ್ತಿದೆ.
  • ಅಂಟಾರ್ಕ್ಟಿಕಾದ ಸಮೋಷ್ಣ ಮಂಡಲದ  ಅತ್ಯಂತ ಕಡಿಮೆ ತಾಪಮಾನವು ‘ಧ್ರುವೀಯ ಸಮೋಷ್ಣ ಮಂಡಲದ ಮೋಡಗಳು’ (PSCs) ಎಂದು ಕರೆಯಲ್ಪಡುವ ಮಂಜುಗಡ್ಡೆಯ ರೀತಿಯ ಮೋಡಗಳನ್ನು ಸೃಷ್ಟಿಸುತ್ತದೆ (ಇದು ರಾಸಾಯನಿಕ ಕ್ರಿಯೆಗೆ ಪೂರಕವಾಗಿದೆ).

ಓಝೋನ್ ಪದರದ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:

ವಿಯೆನ್ನಾ ಸಮಾವೇಶದ ಬಗ್ಗೆ:

  • ಉದ್ದೇಶ:- ಓಝೋನ್ ಪದರದ ಸವಕಳಿಯಿಂದ ಉಂಟಾಗುವ ಯಾವುದೇ ಹಾನಿಕಾರಕ ಪರಿಣಾಮಗಳಿಂದ ಮಾನವನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವುದು.
  • ನಡೆದ ಸ್ಥಳ:- ವಿಯೆನ್ನಾ, ಆಸ್ಟ್ರಿಯಾ.
  • ಅಂಗೀಕಾರ – 1985 ರಲ್ಲಿ.
  • ಜಾರಿಗೆ ಬಂದಿದ್ದು – 1988 ರಲ್ಲಿ.

ಮಾಂಟ್ರಿಯಲ್ ಶಿಷ್ಟಾಚಾರದ ಬಗ್ಗೆ

  • ಜಾರಿ:- ಇದನ್ನು 1987 ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಅಂಗೀಕರಿಸಲಾಯಿತು ಮತ್ತು 1989 ರಲ್ಲಿ ಜಾರಿಗೆ ಬಂದಿತು.
  • ಉದ್ದೇಶ:- ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಓಝೋನ್ ಪದರವನ್ನು ರಕ್ಷಿಸುವುದು.
  • ಕಿಗಾಲಿ ತಿದ್ದುಪಡಿ:- 2016 ರಲ್ಲಿ ರುವಾಂಡಾದ ಕಿಗಾಲಿಯಲ್ಲಿ ಕಾನೂನುಬದ್ಧವಾಗಿ ಬದ್ಧವಾಗಿರುವ ಕಿಗಾಲಿ ತಿದ್ದುಪಡಿಯನ್ನು ಅನುಮೋದಿಸುವ ಮೂಲಕ ಈ ಪ್ರೋಟೋಕಾಲ್ ಅನ್ನು ಇನ್ನಷ್ಟು ಬಲಪಡಿಸಲಾಯಿತು.
  • ಮಹತ್ವ:- ಇದು 2040 ರ ದಶಕದ ಅಂತ್ಯದ ವೇಳೆಗೆ ಪ್ರಬಲ ಹಸಿರುಮನೆ ಅನಿಲಗಳಾಗಿರುವ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆಯನ್ನು ಹಂತಹಂತವಾಗಿ ತೆಗೆದುಹಾಕುವ ಗುರಿಯನ್ನು ಇದು ಹೊಂದಿದೆ.

ಅಸ್ಸಾಂನಲ್ಲಿ ಎರಡು ರಣಹದ್ದು ಪ್ರಭೇದಗಳನ್ನು ಮರು ಪರಿಚಯಿಸಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS)

ಸಾಮಾನ್ಯ ಅಧ್ಯಯನ- 3/ ಪರಿಸರ

ಅಪಾಯಗಳು:

  • ಡೈಕ್ಲೋಫೆನಾಕ್ ಬಳಕೆ: ಇದು ರಣಹದ್ದುಗಳು ಆಹಾರವಾಗಿ ಸೇವಿಸುವ ಜಾನುವಾರುಗಳ ಮೃತದೇಹದಲ್ಲಿ ಕಂಡುಬಂದಿರುವ ಪಶುವೈದ್ಯಕೀಯ ಸ್ಟಿರಾಯ್ಡ್ ರಹಿತ ಉರಿಯೂತ ಶಮನಕಾರಿ ಔಷಧ (NSAID) ವಾಗಿದೆ. ರಣಹದ್ದುಗಳ ಸಾವಿಗೆ ಪ್ರಮುಖ ಕಾರಣವಾದ ಡೈಕ್ಲೋಫೆನಾಕ್‌ನ ಪಶುವೈದ್ಯಕೀಯ ಬಳಕೆಯನ್ನು 2008 ರಲ್ಲಿ ನಿಷೇಧಿಸಲಾಗಿದೆ.
  • ಕೀಟನಾಶಕಗಳು: ಆರ್ಗನೋಕ್ಲೋರಿನ್ ಕೀಟನಾಶಕ, ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್, ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಮತ್ತು ಭಾರ ಲೋಹಗಳ ಇರುವಿಕೆ ಕೂಡ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ.
  • ಇತರೆ ಅಪಾಯಗಳು: ಗೂಡುಕಟ್ಟುವ ಮರಗಳ ಕೊರತೆ, ವಿದ್ಯುತ್ ತಂತಿಗಳಿಂದ ಉಂಟಾಗುವ ವಿದ್ಯುದಾಘಾತ, ಆಹಾರದ ಕೊರತೆ ಮತ್ತು ಕಲುಷಿತ ಆಹಾರ ಸೇವನೆ. 

ಸಂರಕ್ಷಣಾ ಪ್ರಯತ್ನಗಳು:

  • ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಯು “ರಣಹದ್ದು ಸಂರಕ್ಷಣಾ ಕ್ರಿಯಾ ಯೋಜನೆ 2020-2025” ಕ್ಕೆ ಅನುಮೋದನೆ ನೀಡಿದೆ. 
  • ರಣಹದ್ದು ಸಂರಕ್ಷಣಾ ಕೇಂದ್ರ: ಉತ್ತರ ಪ್ರದೇಶ, ತ್ರಿಪುರಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸುವುದು. 
  • ಭಾರತವು ಪೂರ್ವೀಯ ಬಿಳಿ ಬೆನ್ನಿನ ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು ಮತ್ತು ತೆಳುವಾದ ಕೊಕ್ಕಿನ ರಣಹದ್ದು – ಈ ಮೂರು ಪ್ರಭೇದಗಳ 99% ರಷ್ಟು ಸಂತತಿಯನ್ನು ಈಗಾಗಲೇ ಕಳೆದುಕೊಂಡಿದೆ.

ಸಂರಕ್ಷಣಾ ಸ್ಥಿತಿಗತಿ:

  • ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ:
  • ಅನುಸೂಚಿ-1: ಗಡ್ಡಧಾರಿ (ಬಿಯರ್ಡೆಡ್) ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು, ತೆಳುವಾದ ಕೊಕ್ಕಿನ ರಣಹದ್ದು, ಪೂರ್ವೀಯ ಬಿಳಿ ಬೆನ್ನಿನ ರಣಹದ್ದು.
  • ಉಳಿದವುಗಳನ್ನು ‘ಅನುಸೂಚಿ IV ರ ಅಡಿಯಲ್ಲಿ ರಕ್ಷಿಸಲಾಗಿದೆ.
  • IUCN ಕೆಂಪು ಪಟ್ಟಿ:
  • ತೀವ್ರ ಅಳಿವಿನಂಚಿನಲ್ಲಿರುವ (CR): ಪೂರ್ವೀಯ ಬಿಳಿ ಬೆನ್ನಿನ ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು, ತೆಳುವಾದ ಕೊಕ್ಕಿನ ರಣಹದ್ದು ಮತ್ತು ಕೆಂಪು ತಲೆಯ ರಣಹದ್ದು.
  • ಅಳಿವಿನಂಚಿನಲ್ಲಿರುವ (EN): ಈಜಿಪ್ಟಿನ ರಣಹದ್ದು.
  • ಕನಿಷ್ಠ ಕಾಳಜಿ ಇರುವ (LC): ಯುರೇಷಿಯನ್ ಗ್ರಿಫನ್.
  • ಅಪಾಯದ ಸಮೀಪದಲ್ಲಿರುವ (NT): ಹಿಮಾಲಯದ ಗ್ರಿಫಿನ್, ಗಡ್ಡಧಾರಿ (ಬಿಯರ್ಡೆಡ್) ರಣಹದ್ದು ಮತ್ತು ಬೂದು ಬಣ್ಣದ (ಸಿನಿರಿಯಸ್) ರಣಹದ್ದು.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಯ ಬಗ್ಗೆ:

  • ಇದು ಭಾರತದ ಅತಿದೊಡ್ಡ ಮತ್ತು ಹಳೆಯ ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಒಂದಾಗಿದೆ.
  • ಇದನ್ನು ಸೆಪ್ಟೆಂಬರ್ 15, 1883 ರಂದು ಮುಂಬೈನಲ್ಲಿ ಸ್ಥಾಪಿಸಲಾಯಿತು.
  • ಉದ್ದೇಶ:- ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಆಧಾರಿತ ಕ್ರಮಗಳ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವುದು.

ಕುಷ್ಠರೋಗ (Leprosy)

ಸಾಮಾನ್ಯ ಅಧ್ಯಯನ- 2/ ಆರೋಗ್ಯ

ಇದೀಗ ಸುದ್ದಿಯಲ್ಲಿದೆ:

  • ಕುಷ್ಠರೋಗ ಪೀಡಿತ ವ್ಯಕ್ತಿಗಳು ಎದುರಿಸುತ್ತಿರುವ ತಾರತಮ್ಯವನ್ನು ನಿವಾರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.

ಕುಷ್ಠರೋಗದ ಬಗ್ಗೆ:

  • ಕುಷ್ಠರೋಗವನ್ನು ಹ್ಯಾನ್ಸೆನ್ಸ್ ಕಾಯಿಲೆ ಎಂತಲೂ ಕರೆಯಲಾಗುತ್ತದೆ.
  • ರೋಗಕಾರಕ: ಇದು ‘ಮೈಕೋಬ್ಯಾಕ್ಟೀರಿಯಂ ಲೆಪ್ರೆ’ ಎಂಬ ಒಂದು ಬಗೆಯ ಬ್ಯಾಕ್ಟೀರಿಯಾದಿಂದ ಉಂಟಾಗುವ ದೀರ್ಘಕಾಲದ ಸಾಂಕ್ರಾಮಿಕ ರೋಗವಾಗಿದೆ.
  • ಇದು ಬಾಲ್ಯದಿಂದ ಮುಪ್ಪಿನವರೆಗೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತದೆ.
  • ರೋಗಲಕ್ಷಣಗಳು: ಈ ರೋಗವು ಪ್ರಮುಖವಾಗಿ ಚರ್ಮ ಮತ್ತು ಪರಿಧೀಯ ನರಗಳ ಮೇಲೆ ಪರಿಣಾಮ ಬೀರುತ್ತದೆ.
    • ರೋಗ ಪೀಡಿತ ಪ್ರದೇಶದಲ್ಲಿ ಸ್ಪರ್ಶ ಸಂವೇದನೆಯ ನಷ್ಟ ಉಂಟಾಗುತ್ತದೆ.
    • ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆಯು ಉಲ್ಬಣಗೊಂಡು ಶಾಶ್ವತ ಅಂಗವೈಕಲ್ಯಗಳಿಗೆ ಕಾರಣವಾಗಬಹುದು.
  • ಹರಡುವಿಕೆ: ಸೋಂಕಿತ ವ್ಯಕ್ತಿಯ ಮೂಗು ಮತ್ತು ಬಾಯಿಯಿಂದ ಹೊರಬರುವ ತುಂತುರು ಹನಿಗಳ ಮೂಲಕ ಇದು ಹರಡುತ್ತದೆ.
  • ಚಿಕಿತ್ಸೆ: ಕುಷ್ಠರೋಗವು “ಬಹು ಔಷಧ ಚಿಕಿತ್ಸೆ” (MDTಮಲ್ಟಿ-ಡ್ರಗ್ ಥೆರಪಿ) ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ.

ಭಾರತದಲ್ಲಿ ಕುಷ್ಠರೋಗ:

  • ವಿಶ್ವದಾದ್ಯಂತ ವರದಿಯಾಗುವ ಕುಷ್ಠರೋಗ ಪ್ರಕರಣಗಳಲ್ಲಿ ಸುಮಾರು 57% ರಷ್ಟು ಪ್ರಕರಣಗಳು ಭಾರತದಲ್ಲಿಯೇ ವರದಿಯಾಗುತ್ತಲೆ ಇವೆ.
  • ಕುಷ್ಠರೋಗದ ಹರಡುವಿಕೆ ಹೆಚ್ಚಿರುವ ರಾಜ್ಯಗಳು – ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾ.

ಕುಷ್ಠರೋಗ ನಿರ್ಮೂಲನಾ ಪ್ರಯತ್ನಗಳು:

  • ರಾಷ್ಟ್ರೀಯ ಕಾರ್ಯತಂತ್ರ ಯೋಜನೆ (NSP) ಮತ್ತು ಕುಷ್ಠರೋಗ ಮಾರ್ಗಸೂಚಿ (2023-27): 2027 ರ ವೇಳೆಗೆ ಕುಷ್ಠರೋಗದ ಪ್ರಸರಣವನ್ನು ಶೂನ್ಯ ಮಟ್ಟಕ್ಕೆ ತಲುಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
  • ಸುಸ್ಥಿರ ಅಭಿವೃದ್ಧಿ ಗುರಿ (SDG) 3.3: ಇದು 2030 ರ ವೇಳೆಗೆ ಕುಷ್ಠರೋಗವನ್ನು ನಿರ್ಮೂಲನೆಗೊಳಿಸುವ ಗುರಿಯನ್ನು ಹೊಂದಿದೆ.
  • ವಿಶ್ವ ಆರೋಗ್ಯ ಸಂಸ್ಥೆಯು, ಜೋರ್ಡಾನ್ ದೇಶವನ್ನು 2024 ರಲ್ಲಿ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ವಿಶ್ವದ ಮೊದಲ ರಾಷ್ಟ್ರವೆಂದು ಘೋಷಿಸಿತು.

ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು (iMPs – Inhalable Microplastics)

ಸಾಮಾನ್ಯ ಅಧ್ಯಯನ- 2/ ಆರೋಗ್ಯ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಭಾರತದ ಪ್ರಮುಖ ಮಾರುಕಟ್ಟೆಗಳ ಗಾಳಿಯಲ್ಲಿ ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ (iMPs) ಇರುವಿಕೆಯನ್ನು ಬಹಿರಂಗಪಡಿಸಿದೆ.
  • ಇವುಗಳನ್ನು PM2.5 ಮತ್ತು PM10 ಗೆ ಹೋಲಿಸಬಹುದಾದ ಹೊಸ ವರ್ಗದ ಮಾಲಿನ್ಯಕಾರಕಗಳಾಗಿ ಗುರುತಿಸಲಾಗಿದೆ.

ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ (iMPs) ಬಗ್ಗೆ:

  • ಇವು 10 ಮೈಕ್ರೋಮೀಟರ್‌ಗಿಂತ (ಮೈಕ್ರಾನ್) ಕಡಿಮೆ ಗಾತ್ರದ ಪ್ಲಾಸ್ಟಿಕ್ ಕಣಗಳಾಗಿದ್ದು, ಮೂಗಿನ ಮೂಲಕ ಮಾನವನ ಶ್ವಾಸಕೋಶವನ್ನು ಪ್ರವೇಶಿಸಬಲ್ಲವು.
  • ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಇವುಗಳ ಅತಿ ಹೆಚ್ಚು ಸಾಂದ್ರತೆ ಕಂಡುಬಂದಿದ್ದು, ನಗರದ ‘ಕಣರೂಪಿ ವಸ್ತುಗಳಲ್ಲಿ’ (PM) iMP ಗಳು 5% ರಷ್ಟು ಪಾಲನ್ನು ಹೊಂದಿವೆ. ಇವು ಹೆಚ್ಚಾಗಿ ಕೃತಕ ಬಟ್ಟೆಗಳು, ಹೊದಿಕೆ ಸಾಮಗ್ರಿಗಳು, ಟೈರ್ ಸವಕಳಿ ಮತ್ತು ಪಾದರಕ್ಷೆಗಳಿಂದ ಬರುತ್ತವೆ.
  • ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಶ್ವಾಸಕೋಶದ ಆಳಕ್ಕೆ ತೂರಿಕೊಂಡು, ರಕ್ತಪ್ರವಾಹವನ್ನು ಪ್ರವೇಶಿಸಬಹುದು. ಅಲ್ಲದೆ, ಡೈಥೈಲ್ ಥಾಲೇಟ್ ಮತ್ತು ಸೀಸದಂತಹ ಭಾರ ಲೋಹಗಳಂತಹ ವಿಷಕಾರಿ ರಾಸಾಯನಿಕಗಳಿಗೆ ವಾಹಕಗಳಾಗಿ ವರ್ತಿಸುತ್ತವೆ.
  • ಇವು ಕ್ಯಾನ್ಸರ್, ಉಸಿರಾಟದ ಸಮಸ್ಯೆಗಳು, ಹಾರ್ಮೋನ್ ಮತ್ತು ನರವೈಜ್ಞಾನಿಕ ಕಾಯಿಲೆಗಳ ಅಪಾಯವನ್ನು ಒಡ್ಡುತ್ತವೆ.

ಭಾರತದಲ್ಲಿ ಆಕ್ರಮಣಕಾರಿ ವಿದೇಶಿ ಸಸ್ಯಗಳು (Invasive Alien Plants)

ಸಾಮಾನ್ಯ ಅಧ್ಯಯನ -3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಹವಾಮಾನ ಬದಲಾವಣೆ, ಭೂ ಬಳಕೆಯಲ್ಲಾಗುತ್ತಿರುವ ಬದಲಾವಣೆಗಳು ಮತ್ತು ಜೀವವೈವಿಧ್ಯದ ನಷ್ಟದಿಂದಾಗಿ, ಆಕ್ರಮಣಕಾರಿ ವಿದೇಶಿ ಸಸ್ಯಗಳು ಭಾರತದ ಪರಿಸರ ವ್ಯವಸ್ಥೆಗಳನ್ನು ತ್ವರಿತವಾಗಿ ಪರಿವರ್ತಿಸುತ್ತಿವೆ. ಪಶ್ಚಿಮ ಘಟ್ಟಗಳು, ಹಿಮಾಲಯ ಮತ್ತು ಈಶಾನ್ಯ ಭಾರತದಂತಹ ಸೂಕ್ಷ್ಮ ಪರಿಸರ ವಲಯಗಳಲ್ಲಿ ಇವುಗಳ ವ್ಯಾಪ್ತಿ ಸುಮಾರು ದ್ವಿಗುಣಗೊಂಡಿದೆ.

ಆಕ್ರಮಣಕಾರಿ ವಿದೇಶಿ ಸಸ್ಯಗಳ ಬಗ್ಗೆ:

  • ವ್ಯಾಖ್ಯಾನ:- ಆಕ್ರಮಣಕಾರಿ ಪ್ರಭೇದಗಳು ಸ್ಥಳೀಯವಲ್ಲದ ಪ್ರಭೇದಗಳಾಗಿದ್ದು, ಇವುಗಳನ್ನು ಹೊಸ ಪರಿಸರಕ್ಕೆ ಪರಿಚಯಿಸಿದಾಗ, ಅವು ಅಲ್ಲಿನ ಪರಿಸರ ವ್ಯವಸ್ಥೆ, ಆರ್ಥಿಕತೆ ಅಥವಾ ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ.
  • ಈ ಪ್ರಭೇದಗಳು ಸಾಮಾನ್ಯವಾಗಿ ಸ್ಥಳೀಯ ಪ್ರಭೇದಗಳೊಂದಿಗೆ ಸ್ಪರ್ಧಿಸಿ ಅವುಗಳನ್ನು ನಿಯಂತ್ರಿಸುತ್ತವೆ ಅಥವಾ ಅವುಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೆ ನೈಸರ್ಗಿಕ ಪ್ರಕ್ರಿಯೆಗಳನ್ನು ಅಡ್ಡಿಪಡಿಸುತ್ತವೆ ಮತ್ತು ಗಂಭೀರ ಸ್ವರೂಪದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತವೆ.
  • ಇವು ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರಗಳು ಅಥವಾ ಸೂಕ್ಷ್ಮಣು ಜೀವಿಗಳೂ ಆಗಿರಬಹುದು.

ಆಕ್ರಮಣಕಾರಿ ಪ್ರಭೇದಗಳ ಲಕ್ಷಣಗಳು:

  • ಶೀಘ್ರುವಾಗಿ ಸಂತಾನೋತ್ಪತ್ತಿ ಮತ್ತು ಬೆಳವಣಿಗೆ.
  • ಅತ್ಯಧಿಕ ಪ್ರಸರಣ ಸಾಮರ್ಥ್ಯ.
  • ವಿಸ್ತೃತ ಆಹಾರ ಮೂಲಗಳ ಬಳಕೆ/ ವ್ಯಾಪ್ತಿ.
  • ಹೊಸ ಪರಿಸ್ಥಿತಿಗಳಿಗೆ ಶಾರೀರಿಕ ಹೊಂದಿಕೊಳ್ಳುವಿಕೆ.
  • ವಿವಿಧ ಪರಿಸರ ಅಂಶಗಳನ್ನು ತಡೆದುಕೊಳ್ಳುವ ಸಹಿಷ್ಣುತೆ.
  • ಸುತ್ತಮುತ್ತಲಿನ ಪರಿಸರಕ್ಕೆ ಅನುಗುಣವಾಗಿ ತಮ್ಮ ಬೆಳವಣಿಗೆಯ ಸ್ವರೂಪಗಳನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ.

ಭಾರತದಲ್ಲಿ ಕಂಡುಬರುವ ಸಾಮಾನ್ಯ ಆಕ್ರಮಣಕಾರಿ ಪ್ರಭೇದಗಳು:

  • ವೈಪರ್ ಹುಲ್ಲು (Viper grass)
  • ಲ್ಯಾಂಟಾನಾ ಕಾಮಾರಾ ಸಸ್ಯ (Lantana camara)
  • ಪ್ರೊಸೊಪಿಸ್ ಜೂಲಿಫ್ಲೋರಾ/ ವಿಲಾಯತಿ ಬಾಬುಲ್ (Prosopis juliflora)
  • ನೀರಿನ ಹಯಸಿಂತ್ / ಜಲಕುಂಭಿ (Water hyacinth)
  • ಆಫ್ರಿಕಾದ ಕ್ಯಾಟ್‌ಫಿಶ್ (African catfish)
  • ಹತ್ತಿ ಮೀಲಿ ಕೀಟ (Cotton Mealy Bug)
  • ಪ್ರೈಮರೋಸ್ ವಿಲೋ ಸಸ್ಯ (Primrose Willow)

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಕ್ರಮಗಳು:

  • ಜೈವಿಕ ವೈವಿಧ್ಯತೆಯ ಮೇಲಿನ ವಿಶ್ವಸಂಸ್ಥೆಯ ಸಮಾವೇಶ (UNCBD – 1992):- ಪರಿಸರ ವ್ಯವಸ್ಥೆಗಳು, ಆವಾಸಸ್ಥಾನಗಳು ಅಥವಾ ಪ್ರಭೇದಗಳಿಗೆ ಬೆದರಿಕೆ ಒಡ್ಡುವ ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಪರಿಚಯವನ್ನು ತಡೆಯುವ, ನಿಯಂತ್ರಿಸುವ ಅಥವಾ ನಿರ್ಮೂಲನೆ ಮಾಡುವ ಅಗತ್ಯವನ್ನು ಈ ಸಮಾವೇಶವು ಪ್ರತಿಪಾದಿಸುತ್ತದೆ.
  • ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟು (KMGBF – 2022):- ಇದನ್ನು ಯುಎನ್-ಸಿಬಿಡಿ (UN CBD) ಅಡಿಯಲ್ಲಿ ಅಂಗೀಕರಿಸಲಾಗಿದ್ದು, 2030 ರ ವೇಳೆಗೆ ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಪರಿಚಯ ಮತ್ತು ಸ್ಥಾಪನೆಯ ಪ್ರಮಾಣವನ್ನು ಕನಿಷ್ಠ 50% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
  • ಜಾಗತಿಕ ಆಕ್ರಮಣಕಾರಿ ಪ್ರಭೇದಗಳ ಕಾರ್ಯಕ್ರಮ (GISP):– ಇದು ಪ್ರಪಂಚದಾದ್ಯಂತ ಆಕ್ರಮಣಕಾರಿ ಪ್ರಭೇದಗಳ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಸಂಶೋಧನೆ, ಸಾಮರ್ಥ್ಯ ವರ್ಧನೆ ಮತ್ತು ನಿರ್ವಹಣಾ ತಂತ್ರಗಳನ್ನು ಬೆಂಬಲಿಸುತ್ತದೆ.

ರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಕ್ರಮಗಳು:

  • ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಮೇಲಿನ ರಾಷ್ಟ್ರೀಯ ಕ್ರಿಯಾ ಯೋಜನೆ (NAPINVAS):– ಇದು ಆಕ್ರಮಣಕಾರಿ ಪ್ರಭೇದಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಚ್ಚುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.
  • ರಾಷ್ಟ್ರೀಯ ಆಕ್ರಮಣಕಾರಿ ಪ್ರಭೇದಗಳ ಮಾಹಿತಿ ಕೇಂದ್ರ (NISIC):– ಇದು ಭಾರತದಲ್ಲಿನ ಆಕ್ರಮಣಕಾರಿ ಪ್ರಭೇದಗಳ ಕುರಿತು ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.
  • ‘ಹಿಮಾಲಯನ್ ಎನ್ವಿರಾನ್ಮೆಂಟಲ್ ಫೌಂಡೇಶನ್’, ಹಿಮಾಲಯ ಭಾಗದಲ್ಲಿ ಲಂಟಾನ ಕ್ಯಾಮಾರಾದಂತಹ ಆಕ್ರಮಣಕಾರಿ ಪ್ರಭೇದಗಳನ್ನು ನಿಯಂತ್ರಿಸಲು ಶ್ರಮಿಸುತ್ತಿದೆ.

ವಿಶ್ವ ಮಣ್ಣಿನ ದಿನ

ಸಾಮಾನ್ಯ ಅಧ್ಯಯನ- 3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸುಸ್ಥಿರ ನಿರ್ವಹಣೆಯನ್ನು ಪ್ರತಿಪಾದಿಸಲು ಪ್ರತಿ ವರ್ಷ ಡಿಸೆಂಬರ್ 5 ರಂದು ‘ವಿಶ್ವ ಮಣ್ಣಿನ ದಿನ’ವನ್ನು ಆಚರಿಸಲಾಗುತ್ತದೆ.

ವಿಶ್ವ ಮಣ್ಣಿನ ದಿನದ ಬಗ್ಗೆ:

  • ಆಚರಣೆ ದಿನ:- ಡಿಸೆಂಬರ್ 5.
  • ಆಚರಿಸುವ ಸಂಸ್ಥೆ:- ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟ (IUSS).
  • 2025 ರ ಘೋಷವಾಕ್ಯ:- “ಆರೋಗ್ಯಕರ ನಗರಗಳಿಗಾಗಿ ಆರೋಗ್ಯಕರ ಮಣ್ಣು”

ಮಣ್ಣಿನ ಸಂರಕ್ಷಣೆಗಾಗಿ ಕೈಗೊಂಡ ಉಪಕ್ರಮಗಳು:

  • ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ:– ಈ ಯೋಜನೆಯು ರೈತರಿಗೆ ಮಣ್ಣಿನ ಪೋಷಕಾಂಶಗಳ ಸ್ಥಿತಿಗತಿ ವರದಿಗಳನ್ನು ಒದಗಿಸುತ್ತದೆ. ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ಸಾವಯವ ಕೃಷಿಗೆ ಉತ್ತೇಜನ:– ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ “ಪರಂಪರಾಗತ ಕೃಷಿ ವಿಕಾಸ್ ಯೋಜನೆ” (PKVY) ಯಂತಹ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ.

ಜಾಗತಿಕ ಉಪಕ್ರಮಗಳು:

  • ಜಾಗತಿಕ ಮಣ್ಣಿನ ಪಾಲುದಾರಿಕೆ (GSP):– ಇದು ಜಾಗತಿಕ ಮಣ್ಣಿನ ಆಡಳಿತವನ್ನು ಸುಧಾರಿಸಲು ಮತ್ತು ಸುಸ್ಥಿರ ಮಣ್ಣಿನ ನಿರ್ವಹಣೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಯ ನೇತೃತ್ವದ ಒಂದು ಉಪಕ್ರಮವಾಗಿದೆ.
  • ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ (UNCCD):– ಇದು ಜಾಗತಿಕವಾಗಿ ಭೂ ಸವಕಳಿಯನ್ನು ತಡೆಗಟ್ಟಲು ಮತ್ತು ಸುಸ್ಥಿರ ಭೂ ನಿರ್ವಹಣೆಯನ್ನು ಉತ್ತೇಜಿಸಲು ಶ್ರಮಿಸುತ್ತದೆ.
  • ಇದು 2030 ರ ವೇಳೆಗೆ ‘ಭೂ ಸವಕಳಿ ತಟಸ್ಥತೆ’ (LDN) ಸಾಧಿಸುವ ಪ್ರತಿಜ್ಞೆಯನ್ನು ಹೊಂದಿದೆ.

ಕೂನೋ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಅಧ್ಯಯನ- 3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಅಂತರರಾಷ್ಟ್ರೀಯ ಚಿರತೆ ದಿನ (ಡಿಸೆಂಬರ್ 4) ದಂದು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಕೂನೋ ರಾಷ್ಟ್ರೀಯ ಉದ್ಯಾನವನದ ಮುಕ್ತ ಅರಣ್ಯಕ್ಕೆ ಮೂರು ಚಿರತೆಗಳನ್ನು ಬಿಡುಗಡೆ ಮಾಡಿದರು.

ಕೂನೋ ರಾಷ್ಟ್ರೀಯ ಉದ್ಯಾನವನದ ಬಗ್ಗೆ:

  • ಸ್ಥಳ:- ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆ.
  • ನಿರಂತರವಾಗಿ ಹರಿಯುವ ಚಂಬಲ್ ನದಿಯ ಉಪನದಿಯಾದ “ಕೂನೋ ನದಿಯು” ಈ ಉದ್ಯಾನವನದ ಮೂಲಕ ಹರಿಯುವುದರಿಂದ, ಇದಕ್ಕೆ ಈ ಹೆಸರು ಬಂದಿದೆ.
  • ಅಧಿಸೂಚನೆ:- 1981 ರಲ್ಲಿ ಇದನ್ನು “ಕೂನೋ ವನ್ಯಜೀವಿ ಅಭಯಾರಣ್ಯ”ವನ್ನಾಗಿ ಅಧಿಸೂಚಿಸಲಾಯಿತು.
  • ಅರಣ್ಯದ ಪ್ರಕಾರ:- ಉತ್ತರದ ಉಷ್ಣವಲಯದ ಶುಷ್ಕ ಎಲೆ ಉದುರುವ ಕಾಡುಗಳು.

ಹಿನ್ನೆಲೆ:

  • ದಶಕಗಳಿಂದ ಅತಿಯಾದ ಬೇಟೆ, ಆವಾಸಸ್ಥಾನಗಳ ವಿಘಟನೆ ಮತ್ತು ಬೇಟೆ ಪ್ರಭೇದಗಳ (ಆಹಾರದ) ಸಂಖ್ಯೆಯ ಕುಸಿತದ ಕಾರಣದಿಂದ, ಭಾರತ 1952 ರಲ್ಲಿ ಚಿರತೆಗಳು ಅಳಿದುಹೋಗಿವೆ ಎಂದು ಘೋಷಿಸಿತು.
  • ಪ್ರಾಜೆಕ್ಟ್ ಚೀತಾ, 2022 ರಲ್ಲಿ ಪ್ರಾರಂಭವಾಗಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಆಗಮನವು, ಬೃಹತ್ ಮಾಂಸಾಹಾರಿ ಪ್ರಾಣಿಯೊಂದರ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯನ್ನು ಸೃಷ್ಟಿಸಿತು.
  • ಬೋಟ್ಸ್ವಾನ:- ಇದು ಭೂ ಆವೃತ ರಾಷ್ಟ್ರವಾಗಿದ್ದು, ಇದರ ಭೂಪ್ರದೇಶದ ಸುಮಾರು 70% ರಷ್ಟು ಭಾಗ ಕಲಹರಿ ಮರುಭೂಮಿಯಿಂದ ಆವೃತವಾಗಿದೆ. ಇದು ವಿಶ್ವದ ಅತಿದೊಡ್ಡ ಅರಣ್ಯ ಚಿರತೆಗಳ ಸಂತತಿಯನ್ನು ಹೊಂದಿದೆ.

ಪ್ರಾಜೆಕ್ಟ್ ಚೀತಾ (ಚೀತಾ ಯೋಜನೆ), 2022 ರ ಬಗ್ಗೆ:

  • ಪ್ರಾಜೆಕ್ಟ್ ಚೀತಾ ಎನ್ನುವುದು ಸೂಕ್ತವಾದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳಲ್ಲಿ ಚಿರತೆಗಳನ್ನು ಮರು ಪರಿಚಯಿಸುವ ಭಾರತದ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
  • ಪ್ರಾರಂಭಿಸಿದವರು:- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ಇದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 (2006 ರ ತಿದ್ದುಪಡಿ) ರ ಅಡಿಯಲ್ಲಿನ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
  • ವೈಶಿಷ್ಟ್ಯ:- ಇದು ಬೃಹತ್ ಅರಣ್ಯ ಮಾಂಸಾಹಾರಿ ಪ್ರಾಣಿಯ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರವಾಗಿದೆ.
  • ಇಲ್ಲಿಯವರೆಗಿನ ಸ್ಥಳಾಂತರಗಳು:
    • 2022 ರಲ್ಲಿ ನಮೀಬಿಯಾದಿಂದ 8 ಚಿರತೆಗಳು.
    • 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳು.
    • ಬೋಟ್ಸ್ವಾನದಿಂದ 8 ಚಿರತೆಗಳು (2025 ರ ಘೋಷಣೆ).

ಚಿರತೆಯ (ಅಸಿನೊನಿಕ್ಸ್ ಜುಬಾಟಸ್) ಬಗ್ಗೆ:

  • ಇದು ವಿಶ್ವದ ಅತ್ಯಂತ ವೇಗವಾಗಿ ಓಡುವ ಸಸ್ತನಿ ಮತ್ತು ಭಾರತದಲ್ಲಿ ಅಳಿದುಹೋದ (1952) ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ.
  • ಇತರ ದೊಡ್ಡ ಬೆಕ್ಕುಗಳಂತೆ, ಚಿರತೆಗಳು ಘರ್ಜಿಸುವುದಿಲ್ಲ. 
  • ಇದರಲ್ಲಿ ಎರಡು ಮುಖ್ಯ ಪ್ರಭೇದಗಳಿವೆ:
    1. ಆಫ್ರಿಕಾದ ಚಿರತೆ: ದುರ್ಬಲವಾಗಿವೆ (VU).
    2. ಏಷ್ಯಾದ ಚಿರತೆ: ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR), ಇವು ಪೂರ್ವ ಇರಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ.

ನಿಮಗಿದು ಗೊತ್ತೇ? 

  • ಗುಜರಾತ್‌ನಿಂದ ಕೆಲವು ಏಷ್ಯಾಟಿಕ್ ಸಿಂಹಗಳನ್ನು ಮಧ್ಯಪ್ರದೇಶದ ಕೂನೋಗೆ, ಅವುಗಳ ‘ಎರಡನೇ ಆವಾಸಸ್ಥಾನವಾಗಿ ಸ್ಥಳಾಂತರಿಸಲು 2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. ಆದೇಶ ಬಂದು ಹನ್ನೆರಡು ವರ್ಷಗಳಾದರೂ, ಆ ಸ್ಥಳಾಂತರ ಪ್ರಕ್ರಿಯೆಯು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts